ಇನ್ನು ಮುಂದೆ ಯಾರಿಗೂ ಹೀಗೆ ಆಗಬಾರದು ಎಂದು ಕೋರ್ಟ್ ಮೆಟ್ಟಿಲೇರಿದ ನಟ ರಕ್ಷಿತ್ ಶೆಟ್ಟಿ

Krishnaveni K

ಮಂಗಳವಾರ, 16 ಜುಲೈ 2024 (10:14 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾದಲ್ಲಿ ಎರಡು ಹಾಡುಗಳನ್ನು ಅನುಮತಿಯಿಲ್ಲದೇ ಬಳಕೆ ಮಾಡಿದ್ದಾರೆ ಎಂದು ಎಂಆರ್ ಟಿ ಸಂಸ್ಥೆ ಹಕ್ಕು ಸ್ವಾಮ್ಯ ಪ್ರಕರಣ ದಾಖಲಿಸಿತ್ತು. ಇದರ ವಿರುದ್ಧ ಈಗ ರಕ್ಷಿತ್ ಸಿಡಿದೆದ್ದಿದ್ದು ಇನ್ನು ಮುಂದೆ ಯಾರಿಗೂ ಈ ರೀತಿ ಆಗಬಾರದು ಎಂದು ಪಣ ತೊಟ್ಟಿದ್ದಾರೆ.

ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ಸ್ ಪಾರ್ಟಿ ಸಿನಿಮಾದಲ್ಲಿ ತಾವು ಹಕ್ಕುಸ್ವಾಮ್ಯ ಹೊಂದಿರುವ ಹಳೆಯ ಸಿನಿಮಾದ ಎರಡು ಹಾಡುಗಳನ್ನು ಬಳಕೆ ಮಾಡಲಾಗಿದೆ ಎಂದು ಎಂಆರ್ ಟಿ ಸಂಸ್ಥೆ ಪೊಲೀಸರಿಗೆ ದೂರು ನೀಡಿತ್ತು. ಇದರ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಮೌಖಿಕವಾಗಿ ಪೊಲೀಸರು ರಕ್ಷಿತ್ ಗೆ ಸೂಚಿಸಿದ್ದರು.

ಆದರೆ ಈ ಪ್ರಕರಣದ ಬಗ್ಗೆ ಈಗ ಪರಂವಾ ಸ್ಟುಡಿಯೋಸ್ ಸೋಷಿಯಲ್ ಮೀಡಿಯಾ ಪುಟದಲ್ಲಿ ರಕ್ಷಿತ್ ಸಂಪೂರ್ಣ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಬಳಕೆಯಾಗಿದೆ ಎಂದು ಆರೋಪಿಸಲಾಗಿರುವ ಹಾಡುಗಳನ್ನು ಯಾವ ರೀತಿ ಬಳಸಲಾಗಿದೆ ಎಂದು ವಿಡಿಯೋ ಸಮೇತ ಪ್ರಕಟಿಸಿದ್ದಾರೆ. ಈ ಪೈಕಿ ಒಂದು ಹಾಡು ಟಿವಿಯಲ್ಲಿ ಪ್ರಸಾರವಾಗುತ್ತಿರುವುದನ್ನು ತೋರಿಸಿದ್ದರೆ ಮತ್ತೊಂದು ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಹಾಡುತ್ತಿದ್ದಾಳೆ.

ತಮ್ಮ ಮೇಲೆ ಪ್ರಕರಣ ದಾಖಲಿಸಿರುವ ಎಂಆರ್ ಟಿ ಸಂಸ್ಥೆ ಸೇರಿದಂತೆ ಈ ರೀತಿ ತಕರಾರು ತೆಗೆಯುತ್ತಿರುವವರಿಗೆ ಕೃತಿ ಚೌರ್ಯ ಎಂದರೆ ಏನು ಎಂದು ತೋರಿಸಿಕೊಡುತ್ತೇವೆ ಎಂದು ರಕ್ಷಿತ್ ಹೇಳಿದ್ದಾರೆ. ನಾವು ಆ ಹಾಡುಗಳನ್ನು ಯಾವ ರೀತಿ ಬಳಕೆ ಮಾಡಿದ್ದೇವೆ ಎಂದು ಗಮನಿಸಬೇಕು. ನಿಜವಾಗಿಯೂ ಕೃತಿ ಚೌರ್ಯ ಎಂದರೆ ಏನು, ಅನುಮತಿಯಿಲ್ಲದೇ ಒಂದು ಹಾಡನ್ನು ಹೇಗೆ ಬಳಸಿಕೊಳ್ಳಬಾರದು ಎಂಬುದಕ್ಕೆ ಸ್ಪಷ್ಟನೆ ಸಿಗಲಿ. ಈ ಪ್ರಕರಣವನ್ನು ನಾವು ಕೋರ್ಟ್ ನಲ್ಲೇ ಬಗೆಹರಿಸಿಕೊಳ್ಳುತ್ತೇವೆ. ಈ ಘಟನೆ ನಮ್ಮಂತೆ ಸಂಕಷ್ಟ ಎದುರಿಸುವ ಅನೇಕರಿಗೆ ಪರಿಹಾರ ಮತ್ತು ತೊಂದರೆ ನೀಡುವವರಿಗೆ ಪಾಠವಾಗಲಿ ಎಂದು ರಕ್ಷಿತ್ ಅವರ ಪರಂವಾ ಸಂಸ್ಥೆ ಖಡಕ್ ಉತ್ತರ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ