ಪ್ರಭುದೇವ ಆಸೆಯನ್ನು ನಿರಾಸೆಗೊಳಿಸಿದ ಶಾರುಖ್ ಖಾನ್

ಶನಿವಾರ, 24 ಜನವರಿ 2015 (10:27 IST)
ತಾನು ಹೊಸ ಸಾಹಸ ಮಾಡಲು ಹೊರಟರೆ ಇಷ್ಟೆಲ್ಲಾ ವಿಘ್ನಗಳು ಬರಬಹುದು ಎಂದು ಪ್ರಾಯಶಃ ಪ್ರಭುದೇವ ಅವರಿಗೆ ಅನ್ನಿಸಿರಲಿಲ್ಲ ಎಂದು ಕಾಣುತ್ತದೆ. ಇತ್ತೀಚಿಗೆ ಅವರು ನಿರ್ದೇಶಿಸಿದ ಆಕ್ಷನ್ ಜಾಕ್ಸನ್ ಮಕಾಡೆ ಮಲಗಿ ಇನ್ನು ಮುಂದೆ ರೀಮೇಕ್ ಸಾವಾಸ ಬೇಡ ಎನ್ನುವ ಸ್ಥಿತಿಯಲ್ಲಿ ಇರುವಾಗ ಆತ ಮತ್ತೆ ಸೋತು ಹೈರಾಣಾಗಿರುವ ರಾಮ್ ಚರಣ್ ಅವರ ನಟನೆಯ ತೆಲುಗು ಚಿತ್ರ ಗೋವಿಂದುಡು ಅಂದರಿವಾಡಿಲೋ  ಚಿತ್ರವನ್ನು ಮತ್ತೆ ಹಿಂದಿಗೆ ರೀಮೇಕ್ ಮಾಡುವ ಉದ್ದೇಶ ಹೊಂದಿ ತೆಲುಗಿನಲ್ಲಿ ಸೋತ ಚಿತ್ರವನ್ನು ಹಿಂದಿಯಲ್ಲಿ ಗೆಲ್ಲಿಸುವ ಪ್ರಯತ್ನದಲ್ಲಿ ಇದ್ದರು. 
ಆದರೆ ಅವರ ಆ ಆಸೆಗೆ ತಣ್ಣೀರು ಎರೆಚಿದ್ದಾರೆ ನಟ ಶಾರುಖ್ ಖಾ. ಆ ಚಿತ್ರ ರಿಮೇಕ್ ಹಕ್ಕುಗಳನ್ನು ಪಡೆದು ಈಗಾಗಲೇ ಅದರಿಂದ ಹಣ ಕಳೆದುಕೊಂಡವರಿಗೆ ಹಣ ನೀಡಿಸುವ ಪುಣ್ಯ ಕಾರ್ಯ ಮಾಡುವ ಉತ್ಸಾಹದಲ್ಲಿ ಇದ್ದ ಪ್ರಭುದೇವ ಅವರ ಈ ಆಸೆಗೆ ಪುಷ್ಟಿ ನೀಡಿಲ್ಲ ಶಾರುಖ್. ಶಾರುಖ್ ಖಾನ್ ಅವರ ಡೇಟ್ಸ್ ಹೊಂದಿಸಿ ಆ ನಂತರ ಅವರ ಬಳಿ ಈ ಚಿತ್ರದ ಬಗ್ಗೆ ಮಾತನಾಡಿದರಂತೆ. 
 
ಅವರ ಉತ್ಸಾಹಕ್ಕೆ ಶಾರುಖ್ ಖಾನ್ ನೀರಸ ಪ್ರತಿಕ್ರಿಯೆ ನೀಡಿ ಪ್ರಭುದೇವ ಅವರ ಕನಸು ನನಸಾಗದಂತೆ ಮಾಡಿದ್ದಾರೆ. ಅದು ತೆಲುಗಿನ ಫ್ಲಾಪ್ ಚಿತ್ರ. ತೆಲುಗು ಮಂದಿ ಇಷ್ಟಪಡದ ಆ ಚಿತ್ರವನ್ನು ಹಿಂದಿ ಭಾಷಿಗರು ಎಷ್ಟರ ಮಟ್ಟಿಗೆ ಇಷ್ಟ ಪಡಬಹುದು ಎಂದು ಪ್ರಶ್ನಿಸಿ ಆಬಳಿಕ ತನಗೆ ಪ್ರಸ್ತುತ ರೀಮೇಕ್ ಚಿತ್ರಗಳಲ್ಲಿ ನಟಿಸುವ ಆಸೆ ಇಲ್ಲ, ಆ ಮನಸ್ಸು ಬಂದಾಗ ಖಂಡಿತ ನಿಮಗೆ  ಹೇಳುವೆ ಎಂದು ಹೇಳಿದ್ದಾರೆ ಶಾರುಖ್. ಈ ಮೂಲಕ ಹೊಸದನ್ನು ಸಾಧಿಸಬೇಕು ಎನ್ನುವ ಭಾರತದ ಮೈಕೆಲ್ ಜಾಕ್ಸನ್ ಪ್ರಭುದೇವ ಅವರ ಆಸೆಯು ನಿರಾಸೆಯಾಗಿ ಬದಲಾಗಿದೆ. 

ವೆಬ್ದುನಿಯಾವನ್ನು ಓದಿ