ರೈತರು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಕಿಚ್ಚ ಸುದೀಪ್, ಚಿತ್ರರಂಗವು ಕೂಡ ರೈತರೊಡನೆ ಸದಾ ಬೆಂಬಲವಾಗಿ ನಿಲ್ಲುತ್ತದೆ. ರೈತರು ಕುಡಿಯುವ ನೀರನ್ನು ಕೇಳುತ್ತಿದ್ದಾರೆ ಹೊರತು ಬೇರೇನನ್ನೂ ಅಲ್ಲ. ಮನುಷ್ಯನು ಊಟವಿಲ್ಲದಿದ್ದರೆ ಬದುಕಬಹುದು, ಆದರೆ ನೀರಿಲ್ಲದಿದ್ದರೆ ಬದುಕಲಾರ. ಈ ಬಗ್ಗೆ ಸರ್ಕಾರವು ಗಮನಹರಿಸಿ ರೈತರ ಸಂಕಷ್ಟಕ್ಕೆ ಸಹಕರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸುದೀಪ್ ಪ್ರತಿಭಟನಾ ಸ್ಥಳಕ್ಕೆ ಬರುತ್ತಿರುವ ವಿಷಯ ತಿಳಿದು ಸುದೀಪ್ ಅವರನ್ನು ನೋಡಲು ಸಾವಿರಾರು ಜನರು ಆಗಮಿಸಿದ್ದರು. ನೆರೆದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನಿನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸುದೀಪ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಅನ್ನದಾತರಿಗೆ ಅನ್ನದಾತ ಅನ್ನೋ ಬಿರುದನ್ನು ನೀಡಿದ್ದರು. ಈ ಬಿರುದಿಗೆ ತಕ್ಕಂತೆ ಕಿಚ್ಚ ಅನ್ನದಾತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಕಿಚ್ಚನ ಹೃದಯ ವೈಶಾಲ್ಯತೆಯನ್ನ ತೋರಿಸಿತ್ತು.