ಮದುವೆ ಏನೋ ಆಯ್ತು, ಇನ್ನೀಗ ದರ್ಶನ್ ಭೇಟಿಗೆ ತರುಣ್ ಸುಧೀರ್, ಸೋನಲ್ ಪರಪ್ಪನ ಅಗ್ರಹಾರ ಜೈಲಿಗೆ

Krishnaveni K

ಸೋಮವಾರ, 12 ಆಗಸ್ಟ್ 2024 (09:10 IST)
Photo Credit: Instagram
ಬೆಂಗಳೂರು: ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ತಾರೆ ತರುಣ್ ಸುಧೀರ್ ಮತ್ತು ಸೋನಲ್ ಮಾಂಥೆರೋ ಈಗ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ರಾಬರ್ಟ್ ಸಿನಿಮಾ ಮೂಲಕ ಪರಿಚಯವಾದ ತರುಣ್ ಮತ್ತು ಸೋನಲ್ ಈಗ ಸತಿ-ಪತಿಯರಾಗಿದ್ದಾರೆ. ರಾಬರ್ಟ್ ಚಿತ್ರೀಕರಣದ ಸಂದರ್ಭದಲ್ಲೇ ನಾಯಕ ದರ್ಶನ್ ಇಬ್ಬರನ್ನೂ ಕಿಚಾಯಿಸುತ್ತಲೇ ಇದ್ದರಂತೆ. ಆದರೆ ಆಗ ಇಬ್ಬರಿಗೂ ಪ್ರೀತಿ, ಪ್ರೇಮದ ಯೋಚನೆಯಿರಲಿಲ್ಲ.

ಆದರೆ ಬಳಿಕ ತಮ್ಮ ಸಹೋದರನಂತಿರುವ ತರುಣ್ ಗೆ ಸೋನಲ್ ಸರಿಯಾದ ಜೋಡಿ ಎನಿಸಿ ಸ್ವತಃ ದರ್ಶನ್ ಮುಂದೆ ನಿಂತು ಇಬ್ಬರ ಮನೆಯವರ ಜೊತೆಗೂ ಮಾತುಕತೆ ನಡೆಸಿ ಮದುವೆಗೆ ಒಪ್ಪಿಸಿದ್ದರಂತೆ. ವಿಪರ್ಯಾಸವೆಂದರೆ ಮದುವೆ ಸಂದರ್ಭದಲ್ಲಿ ನಟ ದರ್ಶನ್ ಉಪಸ್ಥಿತರಿರಲಿಲ್ಲ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ತಮ್ಮ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ತರುಣ್, ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಗೇ ನೀಡಿ ಆಶೀರ್ವಾದ ಪಡೆದು ಬಂದಿದ್ದರು. ದರ್ಶನ್ ನೋಡಿ ಬಂದ ಬಳಿಕ ತರುಣ್, ಒಂದು ವೇಳೆ ಮದುವೆ ವೇಳೆಗೆ ಅವರು ಬಿಡುಗಡೆಯಾಗದಿದ್ದರೆ ಸೋನಲ್ ಜೊತೆಗೆ ಜೈಲಿಗೇ ಹೋಗಿ ನೋಡಿಕೊಂಡು ಬರುವುದಾಗಿ ಹೇಳಿದ್ದರು. ನಿನ್ನೆ ಮದುವೆ ಸಂದರ್ಭದಲ್ಲೂ ತರುಣ್-ಸೋನಲ್ ಮಾಧ್ಯಮದವರ ಮುಂದೆ ದರ್ಶನ್ ಬಗ್ಗೆ ಮಾತನಾಡುತ್ತಾ ಭಾವುಕರಾಗಿದ್ದರು. ಈಗ ಮದುವೆ ಬಳಿಕ ನವಜೋಡಿ ತಮ್ಮ ಮದುವೆಗೆ ಕಾರಣಕರ್ತರಾಗಿರುವ ನಟ ದರ್ಶನ್ ರನ್ನು ನೋಡಲು ಜೈಲಿಗೇ ಹೋಗಿಬರುತ್ತಾರಾ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ