ಬಾಲಿವುಡ್ ಜನಪ್ರಿಯ ನಟರಾದ ಶಾರೂಕ್ ಖಾನ್, ಸಲ್ಮಾನ್ ಖಾನ್ ಮತ್ತಿತರರನ್ನು ಬೆದರಿಸಿದ್ದ ಮಾಫಿಯಾ ಡಾನ್ ರವಿ ಪೂಜಾರಿ ಕಣ್ಣು ಈಗ ಖ್ಯಾತ ನಿರ್ದೇಶಕರಾದ ಮಹೇಶ್ ಭಟ್ ಮತ್ತು ಫರ್ಹಾ ಖಾನ್ ಮೇಲಿದೆ. ಸೋಮವಾರ ಖಾರ್ನಲ್ಲಿರುವ ಮಹೇಶ್ ಭಟ್ ಕಚೇರಿ ಬಳಿಯಿಂದ ಪೊಲೀಸರು 13 ರವಿ ಪೂಜಾರಿ ಭಂಟರನ್ನು ಬಂಧಿಸಿದ್ದು, ಅವರು ಬೆಚ್ಚಿ ಬೀಳಿಸುವ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾರೆ.
ಭಟ್ ಹತ್ಯೆಗೆ ಸ್ಕೆಚ್
ಸಿನೆಮಾದವರನ್ನು ಹೆದರಿಸಿ ಹಫ್ತಾ ವಸೂಲು ಮಾಡುವ ಸಲುವಾಗಿ ಖ್ಯಾತರೊಬ್ಬರನ್ನು ಸಾಯಿಸುವುದು ರವಿ ಪೂಜಾರಿಯ ಉದ್ದೇಶ. ಇದಕ್ಕಾಗಿ ಅವನು ಮಹೇಶ್ ಭಟ್ರನ್ನು ಆರಿಸಿಕೊಂಡಿದ್ದ. ಮಹೇಶ್ ಭಟ್ ಸಿಗದಿದ್ದರೆ ಅವರ ಅಣ್ಣ ಮುಕೇಶ್ ಭಟ್ ಅಥವ ಮಗ ರಾಹುಲ್ ಭಟ್ ಆದರೂ ಆಗಬಹುದು. ಅವರ ಮೇಲೆ ಗುಂಡು ಹಾರಿಸಿದರೆ ಸುಲಭವಾಗಿ ಪ್ರಚಾರ ಸಿಗುತ್ತದೆ ಮತ್ತು ಬಾಲಿವುಡ್ನವರ ಮನಸ್ಸಿನಲ್ಲಿ ಭಯ ಬೇರೂರುತ್ತದೆ ಎಂದು ಸೂಚಿಸಿದ್ದ.
ಪೂಜಾರಿ ಭಂಟರು ಆರು ದಿನಗಳಲ್ಲಿ ನಾಲ್ಕು ಸಲ ಮಹೇಶ್ ಭಟ್ ಹತ್ಯೆಗೆ ಯತ್ನಿಸಿದ್ದಾರೆ. ನ.10, ನ. 14 ಮತ್ತು ನ.17ರ ನಡುವೆ ಅವರು ಹತ್ಯೆಗೆ ನಡೆಸಿದ ಕೆಲವು ಪ್ರಯತ್ನ ವಿಫಲಗೊಂಡಿದೆ. ಹೀಗಾಗಿ ಅವರು ಮಹೇಶ್ ಭಟ್ರನ್ನು ಬಿಟ್ಟು ಫರ್ಹಾ ಖಾನ್ರನ್ನು ಹಿಂಬಾಲಿಸಲು ತೊಡಗಿದ್ದರು.
ಈ ಹಿಂದೆ ಶಾರೂಕ್ ಖಾನ್, ಸಲ್ಮಾನ್ ಖಾನ್, ಸೋನು ಸೂದ್,ಬೊಮನ್ ಇರಾನಿ , ನಿರ್ಮಾಪಕರಾದ ಮೊರಾನಿ ಸಹೋದರರು, ಫರ್ಹಾನ್ ಅಖ್ತರ್, ರಿತೇಶ್ ಸಿಧ್ವಾನಿ ಮತ್ತಿತರರಿಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿತ್ತು.