ಪತಿ ದರ್ಶನ್ ಬಳ್ಳಾರಿಗೆ ಹೋದರೂ ಕೈಬಿಡದ ಪತ್ನಿ ವಿಜಯಲಕ್ಷ್ಮಿ

Sampriya

ಶನಿವಾರ, 31 ಆಗಸ್ಟ್ 2024 (16:31 IST)
Photo Courtesy X
ಬಳ್ಳಾರಿ: ಮೊನ್ನೆಯಷ್ಟೇ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಅವರನ್ನು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಇಂದು ಬಂದಿದ್ದಾರೆ.

ದರ್ಶನ್ ಅವರು ಪರಪ್ಪನ ಅಗ್ರಹಾರದಲ್ಲಿದ್ದಾಗ ವಿಜಯಲಕ್ಷ್ಮೀ ಅವರು ಮಗ ವಿನೀಶ್‌ನೊಂದಿಗೆ ಪ್ರತೀ ಸೋಮವಾರ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು. ಇದೀಗ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ  ವಿಜಯಲಕ್ಷ್ಮೀ ಅವರು ಮೊದಲ ಭೇಟಿ ನೀಡಿದ್ದಾರೆ.

ಇನ್ನೂ ಭೇಟಿ ವೇಳೆ ದರ್ಶನ್ ಅವರು ಪತ್ನಿ ನೋಡಿ ಭಾವುಕರಾಗಿದ್ದಾರೆ ಎಂದು ತಿಳಿದುಬಂದಿದೆ. ಭೇಟಿ ಸಂದರ್ಭದಲ್ಲಿ ಪತ್ನಿ ಜತೆ ಚಾರ್ಜ್‌ಶೀಟ್ ಬಗ್ಗೆ ಮಾತನಾಡಿದ್ದಾರೆ. ಅದಲ್ಲದೆ ಮುಂದಿನ ಕಾನೂನಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಇನ್ನೂ ಬೆಂಗಳೂರಿನಿಂದ ಪತಿಯನ್ನು ನೋಡಲು ಹೋಗಿರುವ ವಿಜಯಲಕ್ಷ್ಮೀ ಅವರು ಡ್ರೈ ಪ್ರೂಟ್ಸ್‌, ಬಿಸ್ಕೆಟ್‌, ಬಟ್ಟೆ, ಟೂತ್ ಪೇಸ್ಟ್‌, ಹಣ್ಣನ್ನು ಎರಡು ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ವಿಜಯಲಕ್ಷ್ಮೀ ಬ್ಯಾಗ್‌ನಲ್ಲಿ ತಂದ ವಸ್ತುಗಳನ್ನು ತಪಾಸಣೆ ಮಾಡಿದ ಬಳಿಕ ಜೈಲಿನೊಳಗೆ ತೆಗೆದುಕೊಂಡು ಹೋಗಲು ಸಿಬ್ಬಂದಿ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ವಿಐಪಿ ಟ್ರೀಟ್‌ಮೆಂಟ್ ನೀಡುತ್ತಿರುವ ಫೋಟೋ ವೈರಲ್ ಆಗಿತ್ತು. ಸರ್ಕಾರದ ಸೂಚನೆಯಂತೆ ಕೂಡಲೇ ಕ್ರಮ ಕೈಗೊಂಡ ಪೊಲೀಸ್ ಇಲಾಖೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ