ಶಿಕಾರಿ ವಿಮರ್ಶೆ; ಕಳೆದು ಹೋದ ಪುಟಗಳಲ್ಲಿ...

SUJENDRA


ಚಿತ್ರ: ಶಿಕಾರಿ
ತಾರಾಗಣ: ಮಮ್ಮುಟ್ಟಿ, ಪೂನಂ ಬಾಜ್ವಾ, ಅಚ್ಚುತ ಕುಮಾರ್, ಶರತ್ ಲೋಹಿತಾಶ್ವ
ನಿರ್ದೇಶನ: ಅಭಯ್ ಸಿಂಹ
ಸಂಗೀತ: ವಿ. ಹರಿಕೃಷ್

ಪ್ರೇಕ್ಷಕರು ನೋಡುವ ಸಿನಿಮಾ ಮಾಡುವುದು ಬೇರೆ, ಪ್ರೇಕ್ಷಕರು ನೋಡಬೇಕು ಎಂದು ಸಿನಿಮಾ ಮಾಡುವುದು ಬೇರೆ; ಮೊದಲ ಆಯ್ಕೆಯಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುವ ಉದ್ದೇಶವಷ್ಟೇ ಇರುತ್ತದೆ. ಎಲ್ಲಾ ಕ್ರೌರ್ಯಗಳನ್ನು ಹೇಳಿ ಮುಗಿಸಿದ ನಂತರ, ಮಸಾಲೆಗಳು ಮುಗಿದ ನಂತರ ಚರಮ ಸಂದೇಶ.

ಅಭಯ್ ಸಿಂಹ ನಿರ್ದೇಶನದ 'ಶಿಕಾರಿ' ಮೊದಲನೆಯ ಗುಂಪಿಗೆ ಸೇರಿದ ಸಿನಿಮಾ ಖಂಡಿತಾ ಅಲ್ಲವೇ ಅಲ್ಲ. ಆದರೆ ಎರಡನೇ ಗುಂಪಿಗೂ ಸೇರುತ್ತಿಲ್ಲ ಅನ್ನೋದು ಮಾತ್ರ ನೋವಿನ ಸಂಗತಿ. ಆದರೂ ಅವರ ಪ್ರಯತ್ನವನ್ನು ಮೆಚ್ಚಲೇ ಬೇಕು. ಕೆ. ಮಂಜು ಅವರಂತಹ ನಿರ್ಮಾಪಕ, ಮಮ್ಮುಟ್ಟಿ ಅವರಂತಹ ಸ್ಟಾರ್ ನಟರು ಕಲಾತ್ಮಕ ಚಿತ್ರಗಳಿಗಷ್ಟೇ ಒಗ್ಗುವವರಲ್ಲ ಅನ್ನೋದನ್ನು ಮನದಟ್ಟು ಮಾಡಿಕೊಂಡು ನಿರ್ದೇಶನ ಕೊನೆಗೆ ಹೀಗಾಗಿರಬಹುದು ಎಂದು ಅರ್ಥೈಸಲು ಸಾಕಷ್ಟು ಅವಕಾಶಗಳಿವೆ.

SUJENDRA


ಅಭಿಜಿತ್ (ಮಮ್ಮುಟ್ಟಿ) ಸಾಫ್ಟ್‌ವೇರ್ ಇಂಜಿನಿಯರ್. ಕಾದಂಬರಿ ಓದುತ್ತಾ ಕಳೆದು ಹೋದ ಪುಟಗಳ ಹುಡುಕಾಟಕ್ಕೆ ಎಲ್ಲವನ್ನೂ ಬಿಟ್ಟವನು ಸೇರುವುದು ಕರ್ನಾಟಕದ ಮಂಜಿನಡ್ಕಕ್ಕೆ. ಪುಸ್ತಕದ ಲೇಖಕನ ಮನೆಯನ್ನೂ ಹುಡುಕುತ್ತಾನೆ. ಲೇಖಕನ ಮಗಳು ನಂದಿತಾ (ಪೂನಂ ಬಾಜ್ವಾ) ಕಾಲಿಗೆ ಗೆಜ್ಜೆ ಕಟ್ಟಿದ್ದೇನೋ ಎಂಬಂತೆ ಹೊರಟು ನಿಂತಿರುತ್ತಾಳೆ.

ಹೀಗಿರುವ ನಂದಿತಾಳಿಗೆ ತನ್ನ ಉದ್ದೇಶವನ್ನೂ ತಿಳಿಸುತ್ತಾನೆ ಅಭಿಜಿತ್. ಅದಕ್ಕೆ ಬೇಕಾದ ಸಹಕಾರ ನಂದಿತಾಳಿಂದ ಸಿಗುತ್ತದೆ. ವಾಸ್ತವದಲ್ಲಿ ಕಾದಂಬರಿಯಲ್ಲಿನ ರೇಣುಕಾಳನ್ನೇ (ಪೂನಂ ಬಾಜ್ವಾ) ನಂದಿತಾಳಲ್ಲಿ ಅಭಿಜಿತ್ ನೋಡುತ್ತಾನೆ. ನೋಡುತ್ತಾ ನೋಡುತ್ತಾ ತಾನು ಅರುಣ್ (ಮಮ್ಮುಟ್ಟಿ) ಆಗುತ್ತಾನೆ. ಆದರೆ ಅಲ್ಲಿ ನಡೆದಿರುವುದು ನಂದಿನಿಯ ಚಾಕಚಕ್ಯತೆ. ಅದೇನು ಅನ್ನೋದನ್ನು ಚಿತ್ರಮಂದಿರದಲ್ಲೇ ನೋಡಿ.

SUJENDRA


ಶಿಕಾರಿ'ಯ ಬಗ್ಗೆ ಮೊದಲನೇ ಕಂಪ್ಲೇಂಟು ಕಥೆ ಜಾಸ್ತಿಯಾಯ್ತು ಮತ್ತು ಸಿನಿಮಾ ಉದ್ದವಾಯ್ತು ಅನ್ನೋದು. ನಿರ್ದೇಶಕ ಅಭಯ ಸಿಂಹರದ್ದು ಅತ್ತ ಕಲಾತ್ಮಕ ಚಿತ್ರವೂ ಅಲ್ಲದ, ಇತ್ತ ಕಮರ್ಷಿಯಲ್ ಚಿತ್ರವೂ ಆಗದ ತೊಳಲಾಟ. ಆದರೂ ಅವರು ಎರಡನೇ ಚಿತ್ರದಲ್ಲಿ ಸಾಕಷ್ಟು ಬೆಳೆದಿದ್ದಾರೆ. ಇಂತಹ ಬೇಕೆನಿಸುವ ನಿರ್ದೇಶಕರ ಸಾಲಿಗವರು ಸೇರುತ್ತಾರೆ.

ಒಂದು ನಿರ್ದಿಷ್ಟ ವರ್ಗದ ಪ್ರೇಕ್ಷಕರನ್ನು ಕುತೂಹಲದಿಂದ ನೋಡುವಂತೆ ಮಾಡುವ ಉದ್ದೇಶ ನಿರ್ದೇಶಕರದ್ದು. ಅದಕ್ಕಾಗಿ ಬಾಕ್ಸಾಫೀಸ್ ಚಮತ್ಕಾರಗಳು ಬೇಕಿಲ್ಲ, ಅಚ್ಚರಿಗಳ ಅಗತ್ಯವಿಲ್ಲ, ಮನರಂಜನೆ ಅನಿವಾರ್ಯವಲ್ಲ ಎಂಬ ಸ್ಪಷ್ಟತೆಯೂ ಅವರಲ್ಲಿದ್ದಂತಿದೆ. ಆದರೂ ಕಾದಂಬರಿಯಲ್ಲಿ ಪುಟಗಳು ಕಳೆದು ಹೋದಂತೆ ಎಲ್ಲೋ ಏನೋ ಕಳೆದ ಅನುಭವ ಪ್ರೇಕ್ಷಕರಿಗಾದರೆ ಅದಕ್ಕೆ ಬೇರೆ ಯಾರನ್ನೂ ದೂರಲಾಗದು.

SUJENDRA


ಇನ್ನು ಮಮ್ಮುಟ್ಟಿಗೆ ಇಂತಹ ಚಿತ್ರಗಳೇನೂ ಹೊಸತಲ್ಲ. ಕನ್ನಡದಲ್ಲೇ ಡಬ್ಬಿಂಗ್ ಮಾಡಿರುವುದು ಉತ್ತಮ ಪ್ರಯತ್ನ. ಎರಡೆರಡು ಪಾತ್ರಗಳು ಪೂನಂ ಬಾಜ್ವಾಗೆ ಭಾರವೆನಿಸಿಲ್ಲ. ಶರತ್ ಲೋಹಿತಾಶ್ವ ಇದ್ದಕ್ಕಿದ್ದಂತೆ ಅಬ್ಬರಿಸಿ ಗಮನ ಸೆಳೆಯುತ್ತಾರೆ.

ಇಷ್ಟಿದ್ದೂ ಚಿತ್ರವನ್ನು ನೋಡಿಸಿಕೊಂಡು ಹೋಗುವಲ್ಲಿ ಕ್ಯಾಮರಾಮೆನ್ ವಿಕ್ರಮ್ ಶ್ರೀವಾತ್ಸವ್ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಪಾತ್ರ ಮಹತ್ವದ್ದು ಎಂದು ನೆನಪಿಸಿಕೊಳ್ಳಲೇಬೇಕು.

ತಾಂತ್ರಿಕತೆ, ಜಾಗೃತಿ, ಸಂಸ್ಕೃತಿಯಲ್ಲೂ ಶ್ರೀಮಂತವಾಗಿರುವ 'ಶಿಕಾರಿ' ನೋಡಿದದವರಿಗೆ ನಷ್ಟವಂತೂ ಖಂಡಿತಾ ಇಲ್ಲ.

ವೆಬ್ದುನಿಯಾವನ್ನು ಓದಿ