ವಿಭಿನ್ನ ಆಶಯದೊಂದಿಗೆ ಕಿತ್ತೂರಿನ ರಾಣಿ ಸುಮನಾ

MOKSHA
ಈಕೆ ಆಗಲು ಬಯಸಿದ್ದು ಪತ್ರಕರ್ತೆಯಾಗಬೇಕೆಂದು, ಅದಾಯಿತು. ಚಿತ್ರ ನಿರ್ಮಾಣದ ವಿವಿಧ ಹಂತಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಕನಸಿದರು, ಅದೂ ನೆರವೇರಿತು. ಸ್ವತಃ ತಾವೇ ಚಿತ್ರವೊಂದನ್ನು ನಿರ್ದೇಶಿಸಬೇಕೆಂದುಕೊಂಡರು, ಅದೂ ಕೈಗೂಡಿತು. ಆಕೆಯೀಗ ಎರಡನೇ ಚಿತ್ರವನ್ನು ಪ್ರೇಕ್ಷಕರ ಮುಂದಿಡಲಿದ್ದಾರೆ.

ಆಕೆ ಸುಮನಾ ಕಿತ್ತೂರು. ಅಗ್ನಿ ವಾರಪತ್ರಿಕೆಯನ್ನು ಓದಿದವರಿಗೆ ಈಕೆಯ ಬರಹಗಳು ತುಂಬಾ ಇಷ್ಟವಾಗಿರಲಿಕ್ಕೂ ಸಾಕು. ಅದನ್ನೇ ಬೆಳೆಸಿಕೊಂಡು ಬಂದ ಸುಮನಾ, ಹಾಗೇ ಕ್ರಮೇಣವಾಗಿ ಅಗ್ನಿ ಶ್ರೀಧರ್ ನಿರ್ಮಾಣದ ಆ ದಿನಗಳು ಚಿತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಆ ಚಿತ್ರ ಪಡೆದ ಯಶಸ್ಸು ಎಂಥಾದ್ದು ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ.

ನಂತರ ಆತ್ಮವಿಶ್ವಾಸ ಕುದುರಿ, ತಾವೇ ಏಕೆ ಚಿತ್ರವೊಂದನ್ನು ನಿರ್ದೇಶಿಸಬಾರದು ಎಂದುಕೊಂಡಾಗ, ಗುರು ಅಗ್ನಿ ಶ್ರೀಧರ್‌ರಿಂದ ಗ್ರೀನ್ ಸಿಗ್ನಲ್ ಸಿಕ್ಕಿತು. ಆಗ ರೂಪುಗೊಂಡ ಚಿತ್ರವೇ ಸ್ಲಂಬಾಲ. ಈ ಚಿತ್ರದ ಮೂಲಕ ದುನಿಯಾ ವಿಜಯ್‌ಗೊಂದು ವಿಭಿನ್ನ ಇಮೇಜ್ ಸೃಷ್ಟಿಸಿಕೊಟ್ಟ ಸುಮನಾ, ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕರಿಲ್ಲವೆಂಬ ಕೊರತೆಯನ್ನು ನೀಗಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಸ್ಲಂಬಾಲ ಯಶಸ್ವೀ ಚಿತ್ರವೆನಿಸಿಕೊಳ್ಳದಿದ್ದರೂ, ಮಾಧ್ಯಮಗಳಿಂದ ಹಾಗೂ ಪ್ರೇಕ್ಷಕರಿಂದ ಈಕೆಯೂ ಚಿತ್ರ ನಿರ್ದೇಶಿಸಬಲ್ಲಳು ಎಂಬ ಭರವಸೆ ಮೂಡಿಸಿದ್ದಂತೂ ಸುಳ್ಳಲ್ಲ. ಈಕೆಯ ನಿರ್ದೇಶನದ ಬಗ್ಗೆ ಮಾಧ್ಯಮಗಳಿಂದ ಉತ್ತಮ ಪ್ರಶಂಸೆಯೂ ಕೇಳಿ ಬಂತು. ಇದೀಗ ಅದೇ ಪ್ರೋತ್ಸಾಹದಿಂದ ಪ್ರೇರಿತಗೊಂಡು ಕಳ್ಳರ ಸಂತೆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಗಾಂಧಿನಗರದ ಸಿದ್ಧಸೂತ್ರಗಳನ್ನು ಮೀರಿ, ವಿಭಿನ್ನ ಫಾರ್ಮುಲಾದಲ್ಲಿ ಇದು ತಯಾರಿಸಲ್ಪಟ್ಟಿದೆ ಎಂಬ ಅಂತೆ ಕಂತೆಗಳು ಸಾಕಷ್ಟು ಹರಿದಾಡುತ್ತಿದೆ. ಸಮಕಾಲೀನ ವಿದ್ಯಮಾನಗಳಿಗೆ ವಿಡಂಬನೆಯ ಬಣ್ಣ ಕಟ್ಟಿ ಹೇಳುವ ಪ್ರಯತ್ನವಿದು ಎಂದೂ ಚಿತ್ರತಂಡ ಹೇಳುತ್ತಿದೆ.

ಒಟ್ಟಾರೆ ಕಳ್ಳರ ಸಂತೆ ಭರ್ಜರಿ ಪ್ರಚಾರವನ್ನೂ ಪಡೆಯುತ್ತಿದೆ. ಸಾಕಷ್ಟು ನಿರೀಕ್ಷೆ, ಭರವಸೆಗಳನ್ನೂ ಮೊದಲೇ ಹುಟ್ಟಿಸಿದೆ ಕೂಡಾ. ಇದಕ್ಕೆ ಸುಮನಾ ಬೆನ್ನಿಗಿರುವ ಅಗ್ನಿ ಶ್ರೀಧರ್ ಕೂಡಾ ಕಾರಣರು ಎಂದರೆ ತಪ್ಪಲ್ಲ.

ವೆಬ್ದುನಿಯಾವನ್ನು ಓದಿ