ರಸ್ತೆಗಳ ಮರು ನಿರ್ಮಾಣಕ್ಕೆ 210 ಕೋಟಿ ರೂ. ಘೋಷಣೆ!

ಶುಕ್ರವಾರ, 30 ಜುಲೈ 2021 (09:13 IST)
ಕಾರವಾರ(ಜು.30): ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುದಿನವೇ ಬಸವರಾಜ ಬೊಮ್ಮಾಯಿ ಅವರು ಗುರುವಾರ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅತಿವೃಷ್ಟಿಯಿಂದಾದ ಹಾನಿಯನ್ನು ಕಣ್ಣಾರೆ ಕಂಡ ಅವರು .210 ಕೋಟಿ ನೆರವು ನೀಡುವ ಘೋಷಣೆ ಮಾಡಿದರು. ಜತೆಗೆ ನೆರೆಯಿಂದ ಹಾನಿಗೀಡಾಗಿರುವ ರಸ್ತೆ, ಸೇತುವೆ, ಕಟ್ಟಡಗಳನ್ನು ಶೀಘ್ರ ಮರುನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ವಾರ ರಾಜ್ಯದ ಬೆಳಗಾವಿಯಲ್ಲಿ ನೆರೆ ಸಮೀಕ್ಷೆ ನಡೆಸಿದ್ದ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಯದ ಅಭಾವದಿಂದಾಗಿ ಉತ್ತರ ಕನ್ನಡದ ನೆರೆ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿರುವ ಬಸವರಾಜ ಬೊಮ್ಮಾಯಿ ಅವರು ಹಿಂದಿನ ಮುಖ್ಯಮಂತ್ರಿಗಳ ಪ್ರವಾಹ ಪರಿಶೀಲನಾ ಕಾರ್ಯವನ್ನು ಮುಂದುವರಿಸಿದ್ದು, ಅದರಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ, ಗುಳ್ಳಾಪುರ ಸೇತುವೆ, ಅರೆಬೈಲ್ ಘಾಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಅಂಕೋಲಾದಲ್ಲಿ ಸಂಜೆ ಅಧಿಕಾರಿಗಳ ಜತೆ ಸಭೆಯನ್ನೂ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಲೋಕೋಪಯೋಗಿ ರಸ್ತೆ ನಿರ್ಮಾಣಕ್ಕೆ .100 ಕೋಟಿ, ಆರ್ಡಿಪಿಆರ್ ರಸ್ತೆ ನಿರ್ಮಾಣಕ್ಕೆ .100 ಕೋಟಿ ಅರಬೈಲ್ ಘಟ್ಟದಲ್ಲಿ ರಸ್ತೆ ಸರಿಪಡಿಸಲು .10 ಕೋಟಿ ನೀಡುವುದಾಗಿ ಭರವಸೆ ನೀಡಿದರು.
ಕಳಚೆ ಗ್ರಾಮ ಸ್ಥಳಾಂತರ:
ಇದೇ ವೇಳೆ, ಯಲ್ಲಾಪುರ ಕಳಚೆ ಗ್ರಾಮ ವೀಕ್ಷಿಸಿದ್ದು, ಅಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಮನೆ, ಅಡಕೆ ತೋಟ ಹಾನಿಗೊಳಗಾಗಿದೆ. ಹೀಗಾಗಿ ಕಳಚೆ ಗ್ರಾಮವನ್ನು ಸ್ಥಳಾಂತರಗೊಳಿಸಲಾಗುವುದು. ಈ ಬಗ್ಗೆ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ