ದಲಿತ ಮುಖಂಡ, ಬಿಜೆಪಿ ಲೀಡರ್ ಪುತ್ರನಿಂದ ಪೊಲೀಸರ ಮೇಲೆ ಹಲ್ಲೆ..?

ಭಾನುವಾರ, 17 ಸೆಪ್ಟಂಬರ್ 2017 (17:09 IST)
ಬೆಂಗಳೂರು: ದಲಿತ ಸಂಘಟನೆ ಮುಖಂಡ ಮತ್ತು ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಪುತ್ರನ ವಿರುದ್ಧ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿ.ನಾ.ರಾಮು ಪುತ್ರ ಕಾರ್ಲ್ ಮಾರ್ಕ್ಸ್ ಸೇರಿದಂತೆ ನಾಲ್ವರನ್ನ ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಘಟನೆ ಏನು…?

ನಿನ್ನೆ ರಾತ್ರಿ ಬಾರ್ ಸಿಬ್ಬಂದಿ ಜತೆ ಕಾರ್ಲ್ ಮಾರ್ಕ್ಸ್ ಜಗಳ ಆಡುತ್ತಿರುವಾಗ ಪೊಲೀಸರು ಬಿಡಿಸಲು ಬಂದಿದ್ದಾರೆ. ಈ ವೇಳೆ ಪೊಲೀಸರ ಬಳಿಯಿದ್ದ ಲಾಠಿ ಕಸಿದುಕೊಂಡ ಕಾರ್ಲ್ ಮಾರ್ಕ್ಸ್, ಪೇದೆಗಳಾದ ಉಮೇಶ್ ಮತ್ತು ರುದ್ರೇಶ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಲ್ ಮಾರ್ಕ್ಸ್, ನಾನು ಯಾರು ಗೊತ್ತಾ..? ಎಂದು ಧಮಕಿ ಹಾಕಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ರಾಮು ಪುತ್ರ ಕಾರ್ಲ್ ಮಾರ್ಕ್ಸ್ ಸೇರಿ ನಾಲ್ವರನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನ್ನು ಗಾಯಗೊಂಡಿರುವ ಪೇದೆ ಉಮೇಶ್ ಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದು ಬಂದಿದೆ.

ವೆಬ್ದುನಿಯಾವನ್ನು ಓದಿ