ಎಟಿಎಂ ದಾಳಿಕೋರ ಬೆಂಗಳೂರು ಪೊಲೀಸರ ವಶಕ್ಕೆ ಸಿಗುವುದು ಡೌಟು

ಭಾನುವಾರ, 5 ಫೆಬ್ರವರಿ 2017 (11:16 IST)
ಬರೊಬ್ಬರಿ ಮೂರು ವರ್ಷಗಳ ಬಳಿಕ ಆಂಧ್ರದ ಚಿತ್ತೂರಿನಲ್ಲಿ ಸಿಕ್ಕಿ ಬಿದ್ದಿರುವ ಎಟಿಎಂ ದಾಳಿಕೋರ ಮಧುಕರ್ ರೆಡ್ಡಿ ಕರ್ನಾಟಕ ಪೊಲೀಸರ ವಶಕ್ಕೆ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.
ಆರೋಪಿ ಮಧುಕರ್ ರೆಡ್ಡಿ ಸದ್ಯ ಮದನಪಲ್ಲಿ ಪೊಲೀಸರ ವಶದಲ್ಲಿದ್ದು, ಇಂದು ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ನಮ್ಮ ವಶಕ್ಕೆ ಒಪ್ಪಿಸಿ ಎಂದು ಮನವಿ ಮಾಡಿಕೊಳ್ಳಲಿದ್ದಾರೆ. 
 
ಇತ್ತ ಬೆಂಗಳೂರು ಪೊಲೀಸರು ಆರೋಪಿ ಬಗ್ಗೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ಪೋರೇಶನ್ ಬ್ಯಾಂಕ್ ಎಟಿಎಂನಲ್ಲಿ ದಾಳಿ ನಡೆಸಿದ್ದು ನಾನೇ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಆದರೆ ಬೆಂಗಳೂರು ಪೊಲೀಸರು ಮಹಜರ್ ಪಡೆದು ಫ್ರಿಂಗರ್ ಪ್ರಿಂಟ್ ತೆಗೆದುಕೊಂಡ ಮೇಲೆ ಆತನೇ ಆರೋಪಿ ಎಂಬುದು ಖಚಿತವಾಗಲಿದೆ. ಹೀಗಾಗಿ ಆತನನ್ನು ವಶಕ್ಕೆ ಪಡೆದುಕೊಳ್ಳಲು ಬೆಂಗಳೂರು ಪೊಲೀಸರು ಚಿತ್ತೂರಿಗೆ ಧಾವಿಸಿದ್ದಾರೆ. ಆದರೆ ಆತನೇ ಒಪ್ಪಿಕೊಂಡಂತೆ ಮೂರು ಕೊಲೆ, ಎರಡು ಕೊಲೆ ಯತ್ನ ಮತ್ತು ಹಲವು ಸುಲಿಗೆ ಪ್ರಕರಣಗಳಲ್ಲಿ ಆಂಧ್ರದ ಪೊಲೀಸರಿಗೆ ಈತ ಬೇಕಾಗಿರುವುದರಿಂದ, ಈಗಲೇ ಈತ ಬೆಂಗಳೂರು ಪೊಲೀಸರ ವಶಕ್ಕೆ ಸಿಗುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ