ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚದೇ ನಿರ್ಲಕ್ಷ್ಯ ವಹಿಸಿದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಇಂದು ಮಹಾಲಕ್ಷ್ಮೀ ಲೇಔಟ್ನ ಕಂಠೀರವ ಸ್ಟುಡಿಯೋ ಬಳಿ ಬಿಜೆಪಿ ವತಿಯಿಂದ ರಸ್ತೆ ತಡೆ ಚಳವಳಿ ನಡೆಸಲಾಯಿತು.
ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ರಾಜ್ಯ ಮಾಧ್ಯಮ ಪ್ರಕೋಷ್ಠದ ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ ಮತ್ತು ಪಕ್ಷದ ಕಾರ್ಯರ್ತರು ಉಪಸ್ಥಿತರಿದ್ದರು.
ನಗರದಲ್ಲಿ 10 ಸಾವಿರ ಗುಂಡಿಗಳಿವೆ ಎಂದು ಡಿಸಿಎಂ ಶಿವಕುಮಾರ್ ಅವರೇ ಹೇಳಿದ್ದಾರೆ. ಕೇವಲ ಹೇಳಿಕೆಗಷ್ಟೇ ಗುಂಡಿ ಮುಚ್ಚುವ ಕಾರ್ಯ ಸೀಮಿತವಾಗದಿರಲಿ ಎಂದು ನೆ.ಲ. ನರೇಂದ್ರಬಾಬು ಅವರು ತಿಳಿಸಿದರು. ಅಧಿಕಾರಿಗಳು ಮತ್ತು ಎಂಜಿನಿಯರ್ಗಳು ಎ.ಸಿ. ರೂಮಿನಿಂದ ಹೊರಬಂದು ಜನರ ಪ್ರಾಣ ಉಳಿಸಬೇಕೆಂದು ಆಗ್ರಹಿಸಿದರು.
28 ಕ್ಷೇತ್ರಗಳಲ್ಲಿ ಗುಂಡಿ ಮುಚ್ಚಲು ಕಾಂಗ್ರೆಸ್ ಸರಕಾರದ ಬಳಿ ದುಡ್ಡಿಲ್ಲ ಎಂದು ಎಸ್. ಹರೀಶ್ ಅವರು ಆಕ್ಷೇಪಿಸಿದರು. ಗುಂಡಿ ಮುಚ್ಚಲು 1100 ಕೋಟಿ ಹಣ ಬಿಡುಗಡೆ ಮಾಡಿದ್ದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಯಾವ ಗುಂಡಿ ಮುಚ್ಚಿದ್ದೀರಿ? ಎಲ್ಲಿ ಮುಚ್ಚಿದ್ದೀರಿ ಎಂದು ಪ್ರಶ್ನಿಸಿದರು. 1100 ಕೋಟಿ ಮೊತ್ತದ ಲೆಕ್ಕ ಕೊಡಿ ಎಂದು ಒತ್ತಾಯಿಸಿದರು.