ಮತದಾನ ಮಾಡಿದ ಬಳಿಕ ಮಗ ರಾಘವೇಂದ್ರ ಗೆಲ್ಲುತ್ತಾರೆ ಎಂದ ಯಡಿಯೂರಪ್ಪ

Krishnaveni K

ಮಂಗಳವಾರ, 7 ಮೇ 2024 (10:32 IST)
ಶಿವಮೊಗ್ಗ: ಕರ್ನಾಟಕದಲ್ಲಿ ಇಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು ಶಿಕಾರಿಪುರದಲ್ಲಿ ಮತದಾನ ಮಾಡಿದ ಬಳಿಕ ಮಾಜಿ ಸಿಎಂ ಯಡಿಯೂರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಶಿವಮೊಗ್ಗದಿಂದ ಈ ಬಾರಿಯೂ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಪುತ್ರ ರಾಘವೇಂದ್ರ, ಬಿವೈ ವಿಜಯೇಂದ್ರ ಜೊತೆಗೆ ಬಂದು ಇಂದು ಯಡಿಯೂರಪ್ಪ ಶಿಕಾರಿಪುರದ ತಾಲ್ಲೂಕ್ ಪಂಚಾಯತ್ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಅದಾದ ಬಳಿಕ ಮಾಧ‍್ಯಮಗಳೊಂದಿಗೆ ಮಾತನಾಡಿದ ಅವರು ‘ಈ ಬಾರಿ ಮತ್ತೊಮ್ಮೆ ರಾಘವೇಂದ್ರ ಅವರು ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತಾರೆ. ಅಷ್ಟೇ ಅಲ್ಲ ಮೊದಲ ಹಂತದಲ್ಲಿ ನಡೆದಿದ್ದ 14 ಕ್ಕೆ 14 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ. ಈ ಬಾರಿ ನಡೆಯುತ್ತಿರುವ 14 ಕ್ಷೇತ್ರಗಳ ಪೈಕಿ ಒಂದೆರಡು ಕ್ಷೇತ್ರಗಳಲ್ಲಿ ಹೆಚ್ಚು ಕಡಿಮೆಯಾದರೂ ಉಳಿದಂತೆ ಬಿಜೆಪಿ ಗೆಲ್ಲಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದ, ಜನರ ಬೆಂಬಲ ಬಿಜೆಪಿ ಜೊತೆಗಿದೆ’ ಎಂದಿದ್ದಾರೆ.

ಬಿವೈ ವಿಜಯೇಂದ್ರ ಮಾತನಾಡಿ ‘ಎಲ್ಲರೂ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿಗಳಾಗಬೇಕು ಎಂದು ಜನ ಬಯಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಿಂತ ಜನ ಮೋದಿ ಗ್ಯಾರಂಟಿಯಿಂದ ಜನರಲ್ಲಿ ಬಿಜೆಪಿ ಪರ ಭಾವನೆಯಿದೆ. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದು ಜನ ಜಾತಿ, ಮತ ನೋಡದೇ ಮತ ಹಾಕಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ