ಮುಡಾದಲ್ಲಿ ಅಕ್ರಮವಾದರೂ ರಾಹುಲ್ ಗಾಂಧಿ ಎಲ್ಲಿ ಹೋಗಿದ್ದಾರೆ: ಛಲವಾದಿ ನಾರಾಯಣಸ್ವಾಮಿ

Krishnaveni K

ಶುಕ್ರವಾರ, 23 ಆಗಸ್ಟ್ 2024 (15:47 IST)
ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ಭ್ರಷ್ಟಾಚಾರದ ಹಗರಣಗಳ ಕುರಿತು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರು ಬಾಯಿ ಬಿಡುತ್ತಿಲ್ಲವೇಕೆ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನೆಯನ್ನು ಮುಂದಿಟ್ಟರು.
 
ವಿಧಾನಸೌಧದ 1ನೇ ಮಹಡಿಯ ಕೊಠಡಿ ಸಂಖ್ಯೆ 155ರಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ (ಝೀರೊ ಟಾಲರೆನ್ಸ್ ಫಾರ್ ಕರಪ್ಶನ್) ಎಂದು ಹೇಳಿಕೆ ಕೊಟ್ಟ ರಾಹುಲ್ ಗಾಂಧಿಯವರು ಎಲ್ಲಿ ಹೋಗಿದ್ದಾರೆ? ಯಾಕೆ ಕರ್ನಾಟಕದ ಬಗ್ಗೆ ಅವರು ಬಾಯಿ ಬಿಚ್ಚಿಲ್ಲ? ಭ್ರಷ್ಟಾಚಾರಕ್ಕೆ ಅವರ ಅನುಮತಿ ಇದೆಯೇ? ಅಥವಾ ಇಲ್ಲಿನ ವಿಚಾರಗಳು ಅವರ ಗಮನಕ್ಕೆ ಬಂದಿಲ್ಲವೇ ಎಂದು ಕೇಳಿದರು.

ಇದೇ ರಾಜ್ಯದವರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಿಜೆಪಿ ದಲಿತ ಸಮಸ್ಯೆಗಳನ್ನು ಬಿಚ್ಚಿಟ್ಟು ಹಾಗೂ ಹಗರಣಗಳನ್ನು ಮುಂದಿಟ್ಟು ಹೋರಾಡಿದಾಗ ಏನೂ ಅನಿಸಿಲ್ಲವೇ? ಅವರು ಬಾಯಿ ಮುಚ್ಚಿ ಕುಳಿತಿದ್ದೇಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸಂಪೂರ್ಣ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಅದರ ವಿರುದ್ಧ ಬಿಜೆಪಿ ನಿರಂತರ ಹೋರಾಟಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು- ಮೈಸೂರು ಪಾದಯಾತ್ರೆಯನ್ನೂ ನಡೆಸಿದೆ ಎಂದು ನೆನಪಿಸಿದರು. 

ಈಗಿನ ಹೋರಾಟಗಳ ಕುರಿತು ವಿವರಿಸಿದರು. ಇಡೀ ದಲಿತ ಸಮುದಾಯ ನಿಮ್ಮನ್ನು ನಂಬಿ ಮತ ನೀಡಿತ್ತು. ಈಗ ದಲಿತ ಸಮುದಾಯಕ್ಕೆ ದ್ರೋಹ ಮಾಡಿರುವುದು ಸರಿಯೇ ಎಂದು ಕೇಳಿದರು.
 
ಡಿಸಿಎಂ ಉದ್ಧಟತನದ ಮಾತು
ಬೆಂಗಳೂರಿನ ಜನರಿಗೆ ಕೃತಜ್ಞತೆ ಇಲ್ಲ; ವಿಪಕ್ಷಗಳು ಎಷ್ಟೇ ಬೈದರೂ, ಪತ್ರಕರ್ತರು ಎಷ್ಟೇ ಬೈದರೂ ನೀರಿನ ದರ ಏರಿಸದೆ ಬಿಡುವುದಿಲ್ಲ ಎಂದು ಉದ್ಧಟತನದ ಮಾತುಗಳನ್ನು ಮಾನ್ಯ ಉಪ ಮುಖ್ಯಮಂತ್ರಿಗಳು ಆಡಿದ್ದಾರೆ. ಈ ಸಿಟ್ಟು ನಿಮಗ್ಯಾಕೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
 
ಬೆಂಗಳೂರಿನ ನಾಗರಿಕರು ಹೆಚ್ಚು ತೆರಿಗೆ ಕೊಡುತ್ತಾರೆ. ತೆರಿಗೆ ಹೆಚ್ಚು ಕೊಡಲು ಅವರು ಬೇಕು. ಸವಲತ್ತುಗಳಿಗೆ ಅವರು ದೂರ ಇರಬೇಕೇ ಎಂದು ಸವಾಲು ಹಾಕಿದರು. ಬೆಂಗಳೂರಿನ ಜನರ ಬಗ್ಗೆ ಉಗ್ರ ಮಾತನಾಡುವ ನಿಮ್ಮ ಅವಶ್ಯಕತೆ ಬೆಂಗಳೂರಿನ ಜನತೆಗೆ ಇದೆಯೇ ಎಂದರು. ಈಗ ತೆರಿಗೆ ಜೊತೆಗೇ ಅನಧಿಕೃತವಾಗಿ ಚದರಡಿ (ಸ್ಕ್ವೇರ್ ಫೀಟ್) ಟ್ಯಾಕ್ಸ್ ಕೂಡ ಹಾಕಿದ್ದೀರಲ್ಲವೇ? ಅವರಿಗೆ ಉತ್ತಮ ರಸ್ತೆ, ಸಮರ್ಪಕ ಚರಂಡಿ ಸೌಲಭ್ಯ ಸೇರಿ ಎಲ್ಲ ಸವಲತ್ತು ಕೊಟ್ಟು ಅವರನ್ನು ಸಮಾಧಾನ ಪಡಿಸಬೇಕಿತ್ತು ಎಂದು ಸಲಹೆ ನೀಡಿದರು.
 
ನೀವೇ ಮಾಡಿದ ಆದೇಶಗಳನ್ನು ನೀವೇ ಉಲ್ಲಂಘಿಸುತ್ತೀರಿ. ಏನು ಸರಕಾರ ಇದು? ತುಘಲಕ್ ಸರಕಾರವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ವರ್ಗಾವಣೆ ದಂಧೆ ಆಗಿದೆ ಎಂಬ ಮಾತು ಕೇಳಿಸುತ್ತಿದೆ. ಇದೊಂದೇ ದಂಧೆ ಬಾಕಿ ಉಳಿದಿತ್ತೇ ನಿಮಗೆ ಎಂದೂ ಕೇಳಿದರು. ನಿನ್ನೆಯ ಆದೇಶಕ್ಕೆ ಇವತ್ತು ಬೆಲೆ ಇಲ್ಲದಿದ್ದರೆ ಇದೆಂಥ ಸರಕಾರ? ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಇದೇವೇಳೆ ಆಗ್ರಹಿಸಿದರು.
ಮೂಡದ ವಿಷಯದಲ್ಲಿ ಅಧಿವೇಶನದಲ್ಲಿ ಉತ್ತರಿಸಲು ಕಷ್ಟವೆಂದು ಒಂದು ದಿನ ಮೊದಲೇ ಎಸ್‍ಐಟಿ ರಚಿಸಿ ತನಿಖೆಗೆ ಕೊಟ್ಟದ್ದನ್ನು ಅವರು ಟೀಕಿಸಿದರು. ಏನು ಉದ್ದೇಶ ಇದು? ಇದು ಸರಿಯೇ? ನಾವು ಉತ್ತರ ಕೊಡಿ ಎಂದಾಗ ಅಧಿವೇಶನವನ್ನು ಮುಂದೂಡಿ ಓಡಿ ಹೋದಿರಿ. ಅಧಿವೇಶನ ಮುಂದೂಡಿ ಮರುದಿನ ಪತ್ರಿಕಾಗೋಷ್ಠಿ ಮಾಡಿದ್ದೀರಲ್ಲವೇ? ಅದನ್ಯಾಕೆ ಅಲ್ಲೇ ಮಾತನಾಡಿಲ್ಲ ಎಂದು ಸವಾಲು ಹಾಕಿದರು.
 
ಸಿಎಂ, ಡಿಸಿಎಂ ನುಣುಚಿಕೊಳ್ಳುವ ತಂತ್ರ

ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಅದನ್ನು ಮುಂದುವರೆಸಲಿ. ಅವರನ್ನು ಹೇಗಾದರೂ ಮಾಡಿ ಟ್ರ್ಯಾಪ್ ಮಾಡಲು, ಚರ್ಚೆಗೆ ಎಳೆಯಲು ಕಾಂಗ್ರೆಸ್ ಪಕ್ಷ ತಂತ್ರಗಾರಿಕೆ ಮಾಡುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ದೂರಿದರು.
ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ್ ಅವರು ತಮಗೆ ಪ್ರತಿದಿನ ಬರುವ ಸಮಸ್ಯೆಗಳಿಂದ ನುಣುಚಿಕೊಳ್ಳಲು ಯೋಚಿಸುತ್ತಾರೆ. ಆಗ ಅವರು ಕುಮಾರಸ್ವಾಮಿಯವರನ್ನು ನೆನಪಿಸಿಕೊಳ್ಳುತ್ತಾರೆ. ಇದರಿಂದಾಗಿ ಹೇಳಿಕೆ- ಪ್ರತಿ ಹೇಳಿಕೆ ಮುಂದುವರೆಯುತ್ತದೆ ಎಂದು ವಿವರಿಸಿದರು. 

ಜೆಡಿಎಸ್ ಶಾಸಕರು, ಬಿಜೆಪಿ ಮುಖಂಡರು ನಾವು ಇಲ್ಲಿ ಇದ್ದೇವೆ. ನೀವು ಕೇಂದ್ರದ ಸಚಿವರು; ದಯವಿಟ್ಟು ಮೋದಿಯವರ ಜೊತೆ ಸೇರಿ ಉತ್ತಮ ಕೆಲಸ ಮುಂದುವರೆಸಿ ಎಂದು ವಿನಂತಿಸಿದರು. ಬರಿಯ ಕರ್ನಾಟಕದ ಬಗ್ಗೆ ಯೋಚಿಸದಿರಿ; ಇವರು ನಿಮ್ಮನ್ನು ಟ್ರ್ಯಾಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ನಿಮ್ಮನ್ನು ಟೀಕಿಸುತ್ತಾರೆ. ಅವುಗಳಿಗೆ ತಲೆ ಕೆಡಿಸಿಕೊಳ್ಳದೆ ಕೆಲಸ ಮುಂದುವರೆಸಿಕೊಂಡು ಹೋಗಿ; ಇದಕ್ಕೆಲ್ಲ ಉತ್ತರ ಕೊಡದಿರಿ ಎಂದು ಮನವಿ ಮಾಡಿದರು.
 
ಆನೆ ನಡೆದುದೇ ದಾರಿ ಎಂಬಂತೆ ಸರಕಾರ ತೀರ್ಮಾನಕ್ಕೆ ಬಂದರೆ ಅದು ಸರಿಯೇ? ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಕಾನೂನಿಗೆ, ಸಂವಿಧಾನಕ್ಕೆ ಬೆಲೆ ಇಲ್ಲವೇ ಎಂದು ಕೇಳಿದರು. 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ