ಸಿಎಂ ಸಿದ್ದರಾಮಯ್ಯ ತುಘಲಕ್ ದರ್ಬಾರ್ ನಿಲ್ಲಿಸಲಿ: ಕುಮಾರಸ್ವಾಮಿ

ಮಂಗಳವಾರ, 26 ಜುಲೈ 2016 (18:10 IST)
ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ಕೈಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತುಘಲಕ್ ದರ್ಬಾರ ನಿಲ್ಲಿಸಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
 
ಬೆಂಗಳೂರಿನಲ್ಲಿ ನಡೆದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯ ಸರಕಾರ ಸಾರಿಗೆ ನೌಕರರನ್ನು ಹಾಗೂ ಅವರ ಬೇಡಿಕೆಗಳನ್ನು ಕಡೆಗಣಿಸಿದೆ. 2012 ರಲ್ಲಿ ಇದೆ ತರಹ ಸಮಸ್ಯೆ ಉಂಟಾಗಿತ್ತು. ಆಗ ನಾನೇ ಸಂಧಾನ ಮಾಡಿ ಸಮಸ್ಯೆ ಪರಿಹರಿಸಿದ್ದೆ ಎಂದು ತಿಳಿಸಿದರು.
 
ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಗಳಿಂದ ಸಾರಿಗೆ ಇಲಾಖೆಯ ನಷ್ಟ ಸಂಭವಿಸುತ್ತಿಲ್ಲ. ಬದಲಾಗಿ ಎಸಿ ರೂಮ್‌ನಲ್ಲಿ ಕುಳಿತಿರುವ ಅಧಿಕಾರಿಗಳಿಂದ ನಷ್ಟ ಸಂಭವಿಸುತ್ತಿದೆ ಎಂದು ಸಾರಿಗೆ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ರಾಜ್ಯ ಸರಕಾರದ ಹಠಮಾರಿ ಧೋರಣೆಯಿಂದ ಖಂಡಿತವಾಗಿ ಯಶಸ್ಸು ಸಿಗುವುದಿಲ್ಲ. ರಾಜ್ಯ ಸರಕಾರ ತುಘಲಕ್ ದರ್ಬಾರ ನಿಲ್ಲಿಸಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ