ಕಾಂಗ್ರೆಸ್`ಗೆ ಬಿಬಿಎಂಪಿ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದೇವೆ: ದೇವೇಗೌಡ

ಭಾನುವಾರ, 24 ಸೆಪ್ಟಂಬರ್ 2017 (14:02 IST)
ಬಿಬಿಎಂಪಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರೆಯಲಿದ್ದು, ಕಾಂಗ್ರೆಸ್`ಗೆ ಮೇಯರ್ ಸ್ಥಾನ ಮತ್ತು ಜೆಡಿಎಸ್`ಗೆ ಉಪಮೇಯರ್ ಸ್ಥಾನ ಸಿಗಲಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಬಗ್ಗೆ ಚರ್ಚೆ ನಡೆಯಿತು. ಈಗಾಗಲೇ, ರಾಮಲಿಂಗಾರೆಡ್ಡಿ ಜೊತೆ ಚರ್ಚಿಸಿದ್ದ ಸಂಸದ ಕುಪೇಂದ್ರರೆಡ್ಡಿ ಮತ್ತು ಜೆಡಿಎಸ್ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.  ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡರು, ಕಾಂಗ್ರೆಸ್`ಗೆ ಬಿಬಿಎಂಪಿ ಮೇಯರ್ ಸ್ಥಾನ ಬಿಟ್ಟುಕೊಟ್ಟಿದ್ದೇವೆ, ಅವರು ಯಾರನ್ನ ಬೇಕಾದರೂ ಮೇಯರ್ ಮಾಡಲಿ. ಜೆಡಿಎಸ್`ಗೆ ಉಪಮೇಯರ್ ಸ್ಥಾನ ಸಿಗಲಿದೆ. ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಬಳಿಕ ಚರ್ಚಿಸಿ ಉಪಮೇಯರ್ ಆಯ್ಕೆ ಮಾಡಲಾಗುವುದಾಗಿ ಹೇಳಿದರು. ಜೆಡಿಎಸ್ ಬಗ್ಗೆ ಕಾಂಗ್ರೆಸ್ ಉದಾಸೀನತೆ ಬಗ್ಗೆ ಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ನೋವು ತೋಡಿಕೊಂಡಿದ್ದಾರೆ. ಉದಾಸೀನತೆ ಮುಂದುವರೆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದೇವೇಗೌಡರು ಕಾಂಗ್ರೆಸ್`ಗೆ ಎಚ್ಚರಿಕೆ ನೀಡಿದ್ದಾರೆ.

 
ಇದೇವೇಳೆ, ಸ್ಥಾಯಿ ಸಮಿತಿಗಳ ಬಗ್ಗೆಯೂ ಚರ್ಚೆ ನಡೆಸಿರುವುದಾಗಿ ದೇವೇಗೌಡರು ತಿಳಿಸಿದ್ದಾರೆ. ಜೆಡಿಎಸ್`ಗೆ 4 ಸ್ಥಾಯಿ ಸಮಿತಿಗಳನ್ನ ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪಿರುವುದಾಗಿ ತಿಳಿದು ಬಂದಿದೆ. ಇದೇ 28ರಂದು ಬಿಬಿಎಂಪಿ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ