ಚರಂಡಿ ಸ್ವಚ್ಛತಾ ಅಭಿಯಾನ ಕೈಗೊಳ್ಳಿ ಎಂದ ಡಿಸಿ

ಬುಧವಾರ, 10 ಅಕ್ಟೋಬರ್ 2018 (13:51 IST)
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಚರಂಡಿಗಳನ್ನು ಏಕಕಾಲದಲ್ಲಿ 10 ದಿನದೊಳಗೆ ಸ್ವಚ್ಛಗೊಳಿಸಲು “ಚರಂಡಿ ಸ್ವಚ್ಛತಾ ಅಭಿಯಾನ” ಕೈಗೊಳ್ಳುವಂತೆ ಪಾಲಿಕೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ ಘಟನೆ ನಡೆದಿದೆ.

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ನಗರದ ಅಭಿವೃದ್ಧಿ, ಸ್ವಚ್ಛತೆ, ಕುಡಿಯುವ ನೀರು ಕುರಿತು ಕರೆಯಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿ ಆರ್.ವೆಂಕಟೇಶ್ ಕುಮಾರ, ಈ ವಿಶೇಷ ಅಭಿಯಾನ ಕೈಗೊಳ್ಳುವ ಪೂರ್ವ ಪ್ರಸ್ತುತ ಪೌರಕಾರ್ಮಿಕರ ಸಂಖ್ಯೆ, ಚರಂಡಿ ಸ್ವಚ್ಛತೆಗೆ ನಿಯೋಜನೆಗೊಂಡಿರುವ ಸಫಾಯಿ ಕರ್ಮಚಾರಿಗಳ ಸಂಖ್ಯೆಯ ವಿವರದೊಂದಿಗೆ ವಿಶೇಷ ಅಭಿಯಾನದ ಸಂಪೂರ್ಣ ಕ್ರಿಯಾ ಯೋಜನೆಯನ್ನು ಮೂರು ದಿನದೊಳಗೆ ಸಲ್ಲಿಸುವಂತೆ ಪಾಲಿಕೆಯ ಪರಿಸರ ಅಭಿಯಂತರರಿಗೆ ನಿರ್ದೇಶನ ನೀಡಿದರು.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಗರದ ಪ್ರದಕ್ಷಿಣೆ ಸಂದರ್ಭದಲ್ಲಿ ಚರಂಡಿ ಸ್ವಚ್ಛತೆ ಸಂಬಂಧ ದೂರುಗಳು ಕೇಳಿಬಂದಿವೆ.  ಚರಂಡಿಯಲ್ಲಿ ರೊಚ್ಚು ನೀರು ಸರಾಗವಾಗಿ ಸಾಗದ ಪರಿಣಾಮ ಕೆಟ್ಟ ವಾಸನೆ ಪ್ರದೇಶದ ತುಂಬಾ ಹಬ್ಬಿ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.  
ಹೀಗಾಗಿ ಆಗಾಗ ಚರಂಡಿಯನ್ನು ಸ್ವಚ್ಛಗೊಳಿಸುತ್ತಿರಬೇಕು ಎಂದ ಅವರು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ತೆರೆದ ಚರಂಡಿ ಕುರಿತು ಸಮೀಕ್ಷೆ ಕೈಗೊಂಡು 3 ದಿನದೊಳಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ವರದಿ ಸಲ್ಲಿಸಬೇಕು ಎಂದು ಹೇಳಿದರು. ಜನರು ದೂರು ನೀಡಿದಾಗ ತ್ವರಿತವಾಗಿ ಸ್ಪಂದಿಸಬೇಕೆಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ