ಭಿನ್ನಮತ ಸ್ಫೋಟ: ಬಿ.ಎಸ್,.ಯಡಿಯೂರಪ್ಪ ಕರೆದ ಸಭೆಗೆ ಈಶ್ವರಪ್ಪ ಗೈರು

ಶನಿವಾರ, 2 ಜುಲೈ 2016 (13:22 IST)
ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆದ ಸಭೆಗೆ ಹಿರಿಯ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ನಿರೀಕ್ಷೆಯಂತೆ ಗೈರುಹಾಜರಾಗಿದ್ದಾರೆ.
 
ಕೋರ್ ಕಮಿಟಿಯಲ್ಲಿ ಚರ್ಚಿಸದೆ ಪದಾಧಿಕಾರಿಗಳ ನೇಮಕ ಮಾಡಿರುವುದು ಪಕ್ಷದ ನೀತಿಗಳಿಗೆ ವಿರುದ್ಧವಾಗಿದೆ. ಪದಾಧಿಕಾರಿಗಳ ನೇಮಕದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಈಶ್ವರಪ್ಪ ಬಹಿರಂಗವಾಗಿಯೇ ಗುಡುಗಿದ್ದರು.
 
ಯಡಿಯೂರಪ್ಪ ಬಿಜೆಪಿ ಅಧ್ಯಕ್ಷರಾದಾಗ ರಾಜ್ಯ ಬಿಜೆಪಿ ಸಂತಸಗೊಂಡಿತ್ತು. ಇದೀಗ ಅವರ ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಬಿಜೆಪಿ ಕಾರ್ಯಕರ್ತರು ನಮ್ಮನ್ನೇ ಟೀಕಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 
ಈಶ್ವರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಶಾಸಕ ಸಿ.ಟಿ.ರವಿ ಸೇರಿದಂತೆ ಅನೇಕ ಮುಖಂಡರು ಯಡಿಯೂರಪ್ಪ ಕರೆದ ಸಭೆಗೆ ಗೈರುಹಾಜರಾಗಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ಚರ್ಚೆ ನಡೆಸಿದ್ದರು. ಅದರಂತೆ ಇಂದು ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಯಡಿಯೂರಪ್ಪ ಕರೆದ ಸಭೆಗೆ ಗೈರುಹಾಜರಾಗಿದ್ದಾರೆ.
 
ಯಾವುದೇ ಕಾರಣಕ್ಕೂ ಪದಾಧಿಕಾರಿಗಳ ನೇಮಕವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದ್ದರೆ, ಯಾವುದೇ ಕಾರಣಕ್ಕೂ ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ. 
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ