ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಮತ್ತೆ ಶುರುವಾಗಿದೆ. ಡಿಕೆ ಶಿವಕುಮಾರ್ ಬೆಂಬಲಿಗರು ಮಹತ್ವದ ಹೆಜ್ಜೆಯಿಟ್ಟಿದ್ದು ಒತ್ತಡ ತಂತ್ರಕ್ಕೆ ಮೊರೆ ಹೋಗಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಇದುವರೆಗೆ ಹೈಕಮಾಂಡ್ ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಸಿದ್ದರಾಮಯ್ಯನವರನ್ನು ಕೆಳಗಿಳಿಸುವುದು ಅಷ್ಟು ಸುಲಭದ ಮಾತಲ್ಲ.ಹೀಗಾಗಿ ಡಿಕೆಶಿ ಬಣದಲ್ಲಿ ಅಸಮಾಧಾನ ಕಂಡುಬರುತ್ತಿದೆ.
ನಿನ್ನೆ ರಾತ್ರಿ ಮೇಖ್ರಿ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಡಿಕೆ ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಸುಮಾರು 40 ಶಾಸಕರು ಈ ಡಿನ್ನರ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಡಿಕೆಶಿ ಬಣದ ಬಲ ಪ್ರದರ್ಶನ ಮಾಡಿದ್ದಾರೆ.
ಸಿಪಿ ಯೋಗೇಶ್ವರ್, ಎಚ್ ಸಿ ಬಾಲಕೃಷ್ಣ, ನಯನಾ ಮೋಟಪ್ಪ, ಎನ್ ಎ ಹ್ಯಾರಿಸ್, ಡಿ ಸುಧಾಕರ್, ಟಿಬಿ ಜಯಚಂದ್ರ, ರವಿ ಗಣಿಗ, ಪ್ರಕಾಶ್ ಕೋಳಿವಾಡ ಮುಂತಾದವರು ಭಾಗಿಯಾಗಿದ್ದಾರೆ. ಇನ್ನು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಶಾಸಕ ಸಿಪಿ ಯೋಗೇಶ್ವರ್, ಎಚ್ ಸಿ ಬಾಲಕೃಷ್ಣ ಬರ್ತ ಡೇ ನಿಮಿತ್ತ ಒಟ್ಟಿಗೆ ಸೇರಿ ಊಟ ಮಾಡಿದ್ದೆವು ಎಂದಿದ್ದಾರೆ. ಹಾಗಿದ್ದರೂ ಈ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಯಾಗಿದೆ ಎನ್ನಲಾಗಿದೆ.