ಡಿಕೆಶಿ, ಈಶ್ವರಪ್ಪ ಮಾತಿನ ಚಕಾಮಕಿ

ಬುಧವಾರ, 16 ಫೆಬ್ರವರಿ 2022 (14:46 IST)
ಬೆಂಗಳೂರು : ವಿಧಾನಸಭೆಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ನಡುವೆ ಮಾತಿನ ಯುದ್ಧ ನಡೆದಿದೆ.
 
ಈಶ್ವರಪ್ಪ ರಾಷ್ಟ್ರದ್ರೋಹಿ ಎಂದು ಡಿಕೆಶಿ ಕೂಗುತ್ತಿದ್ದಂತೆ ಈಶ್ವರಪ್ಪ ನಾನಲ್ಲ ರಾಷ್ಟ್ರದ್ರೋಹಿ ನೀನು ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆಯಲ್ಲಿ ಇಂದು ಈಶ್ವರಪ್ಪ ಮತ್ತು ಡಿಕೆ ಶಿವಕುಮಾರ್ ಇಬ್ಬರು ನಾಯಕರು ಮಾತಿನ ಜಗಳಕ್ಕೆ ಇಳಿದ ಪ್ರಸಂಗ ನಡೆಯಿತು. ಕೆಲದಿನಗಳ ಹಿಂದೆ ಈಶ್ವರಪ್ಪ ರಾಷ್ಟ್ರಧ್ವಜದ ಬಗ್ಗೆ ನೀಡಿದ ಹೇಳಿಕೆ ಇಂದು ವಿಧಾನಸಭೆಯಲ್ಲಿ ಕೊಲಾಹಲ ಸೃಷ್ಟಿಸಿತು.

ಈಶ್ವರಪ್ಪ ಮಾತಿನ ಬಗ್ಗೆ ಸಿದ್ದರಾಮಯ್ಯ ಧ್ವನಿ ಎತ್ತುತ್ತಿದ್ದಂತೆ, ಡಿ.ಕೆ ಶಿವಕುಮಾರ್, ಈಶ್ವರಪ್ಪ ವಿರುದ್ಧ ವಾಕ್ಸಮರ ನಡೆಸಿದರು. 

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಶ್ವರಪ್ಪ ಹೇಳಿಕೆಯ ಬಗ್ಗೆ ಅವರ ಅಭಿಪ್ರಾಯ ಕೇಳುತ್ತೇನೆ ಎಂದಾಗ, ದೇಶದ್ರೋಹ ಮಾಡಿವರೊಂದಿಗೆ ಏನು ಉತ್ತರ ಕೇಳುತ್ತೀರಿ ಎಂದು ಡಿಕೆಶಿ ಪ್ರಶ್ನಿಸಿದರು.

ಶಿವಕುಮಾರ್ ಮಾತಿಗೆ ತೀವ್ರ ಸಿಟ್ಟಿಗೆದ್ದ ಈಶ್ವರಪ್ಪ ರಾಷ್ಟ್ರ ದ್ರೋಹಿ ಅವನು, ಜೈಲಿಗೆ ಹೋಗಿ ಬಂದವನು ನನಗೇನು ಹೇಳೋದು, ಬೇಲ್‍ನಲ್ಲಿ ಇದ್ದೀಯಾ, ನೀನು ರಾಷ್ಟ್ರ ದ್ರೋಹಿ ನೀನು ನನಗೆ ಹೇಳಬೇಡ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದರು. ಸದನದಲ್ಲಿ ಕೆಲಕಾಲ ಏಕವಚನದಲ್ಲಿ ಇಬ್ಬರೂ ಕೈ, ಕೈ ತೋರಿಸಿಕೊಂಡು ಕೂಗಾಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ