ಹೆಂಡತಿ ಕಪ್ಪಗಿದ್ದಾಳೆಂದು ಹತ್ಯೆಗೈದ ಪತಿ ಮಹಾಶಯ?

ಶನಿವಾರ, 27 ಮೇ 2017 (16:19 IST)
ವಿವಾಹವಾದ ಪತ್ನಿ ಕಪ್ಪಗಿದ್ದಾಳೆಂದು ರೋಸಿಹೋದ ಪತಿ ಮಹಾಶಯನೊಬ್ಬ ಆಕೆಯನ್ನು ಹತ್ಯೆಗೈದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ,
 
ರಕ್ತದೊತ್ತಡ ಕಡಿಮೆಯಾಗಿದ್ದರಿಂದ ಸಾವನ್ನಪ್ಪಿದ್ದಾಳೆ ಎಂದು ಮೃತ  23 ವರ್ಷ ವಯಸ್ಸಿನ ಜ್ಯೋತಿ ಸಜ್ಜನ್ ಪತಿಯ ಕುಟುಂಬದವರು ಆಕೆಯ ತವರುಮನೆಗೆ ಮಾಹಿತಿ ನೀಡಿದ್ದರು. ಮೂರು ದಿನಗಳ ಹಿಂದೆ ತವರು ಮನೆಯವರು ಆಕೆಯ ಶವಸಂಸ್ಕಾರ ಮಾಡಿದ್ದರು. ಆದರೆ, ನಂತರ ಸಂಶಯ ಬಂದ ಹಿನ್ನೆಲೆಯಲ್ಲಿ ಪೋಷಕರು ಇಳಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
 
ಭಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಜಮ್ಮಲದಿನ್ನಿಯಲ್ಲಿ ಶವಸಂಸ್ಕಾರ ಮಾಡಲಾಗಿತ್ತು. ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರಿಂದ ಹೂತಿಟ್ಟಿದ್ದ ಶವವನ್ನು ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಜ್ಯೋತಿ ಪತಿ ಶಿವರಾಜ್, ಆಕೆಯ ಅತ್ತೆ ಮತ್ತು ಮೈದುನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ