ಸರಕಾರದಿಂದ ಜಿಲೇಬಿ, ನಾನ್‌ಜಿಲೇಬಿ ಫೈಲ್‌ಗಳಲ್ಲಿ ತಾರತಮ್ಯ: ಶೆಟ್ಟರ್

ಸೋಮವಾರ, 20 ಮಾರ್ಚ್ 2017 (16:27 IST)
ಜಿಲೇಬಿ ಫೈಲ್‌ಗಳನ್ನು ನೆನೆಗುದಿಗೆ ಹಾಕಿ ನಾನ್ ಜಿಲೇಬಿ ಪೈಲ್‌ಗಳನ್ನು ಕ್ಲೀಯರ್ ಮಾಡಲಾಗುತ್ತಿದೆ. ಸರಕಾರದಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತಲಾಗ್ತಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
 
ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲೇಬಿ ಫೈಲ್‌ ಅಂದರೆ, ಗೌಡರು, ಲಿಂಗಾಯುತರು ಮತ್ತು ಬ್ರಾಹ್ಮಣರ ಫೈಲ್‌ಗಳನ್ನು ನೆನೆಗುದಿಗೆ ಹಾಕಲಾಗುತ್ತಿದೆ. ಇತರ ಧರ್ಮದವರ ಫೈಲ್‌ಗಳಿಗೆ ಮುಕ್ತಿ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 
ಈ ಹಿಂದೆ ಜೆಡಿಎಸ್ ಶಾಸಕ ಬಸವರಾಜ್ ಹೊರಟ್ಟಿ ಕೂಡಾ ಇಂತಹದೇ ಆರೋಪ ಮಾಡಿದ್ದರು. ಜಾತಿ- ಜಾತಿ, ಧರ್ಮ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದ್ದೀರಾ ಎಂದು ಕಿಡಿಕಾರಿದರು. 
 
ಅಲ್ಪಸಂಖ್ಯಾತ ರೈತರಿಗೆ ಹೊಸ ಯೋಜನೆ ಘೋಷಣೆ ಮಾಡಿದ್ದೀರಾ. ಯಾವುದೇ ಯೋಜನೆ ಘೋಷಿಸಬೇಕಾದಲ್ಲಿ ಎಲ್ಲಾ ಧರ್ಮದವರಿಗೆ ಅನ್ವಯವಾಗುವಂತೆ ಘೋಷಿಸಿ. ವೋಟ್ ಬ್ಯಾಂಕ್ ಮಾಡುವುದನ್ನು ಬಿಡಿ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
 
ಜಗದೀಶ್ ಶೆಟ್ಟರ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಜಿಲೇಬಿ, ನಾನ್ ಜಿಲೇಬಿ ಎನ್ನುವಂತೆ ಫೈಲ್‌ಗಳ ಪರಿಗಣನೆ ಮಾಡಿಲ್ಲ ಎಂದು ತಿರುಗೇಟು ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ