ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ನಿರಂತರ ಮಳೆಯಾಗಿತ್ತು. ಈ ವಾರವೂ ಮಳೆಯಿರುತ್ತಾ ಅಥವಾ ಅಬ್ಬರ ಕಡಿಮೆಯಾಗುತ್ತಾ ಇಲ್ಲಿದೆ ವಾರದ ಹವಾಮಾನ ವರದಿ.
ಕಳೆದ ಎರಡು ವಾರಗಳಿಂದ ನಿರಂತರ ಮಳೆಯಾಗಿ ಸಾಕಷ್ಟು ಹಾನಿಗಳಾಗಿವೆ. ವಿಶೇಷವಾಗಿ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹವಾಮಾನ ವರದಿಗಳ ಪ್ರಕಾರ ಕರಾವಳಿ ಮತ್ತು ಮಲೆನಾಡಿನಲ್ಲಿ ಈ ವಾರವೂ ನಿರಂತರ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಈ ವಾರವೂ ಭಾರೀ ಮಳೆಯ ನಿರೀಕ್ಷೆಯಿದೆ.
ಕಳೆದ ವಾರ ಬೆಂಗಳೂರಿನಲ್ಲೂ ನಿರಂತರ ಮಳೆಯಾಗಿತ್ತು. ಆದರೆ ಈ ವಾರ ಬುಧವರಾದ ಬಳಿಕ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ವಾರದ ಆರಂಭದಲ್ಲಿ ವರುಣ ಬಿಡುವು ನೀಡಲಿದ್ದಾನೆ. ಉಳಿದಂತೆ ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಿಗೂ ಈ ವಾರವಿಡೀ ಮಳೆಯ ಸೂಚನೆಯಿದೆ.
ಇದಲ್ಲದೆ, ಚಾಮರಾಜನಗರ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಬೀದರ್ ಜಿಲ್ಲೆಗಳಲ್ಲಿ ವಾರವಿಡೀ ಮಳೆಯ ಸೂಚನೆಯಿದೆ. ಉಳಿದ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆಯಾಗುವ ಸಾಧ್ಯತೆಯಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ರಾಜ್ಯಾದಾದ್ಯಂತ ಸರಾಸರಿಯಾಗಿ ನೋಡಿದರೆ ಮಳೆಯ ಅಬ್ಬರ ಕಡಿಮೆ ಎನ್ನಬಹುದು.