ಬೆಂಗಳೂರು: ರಾಜ್ಯದಲ್ಲಿ ಈಗ ಬೇಸಿಗೆ ರುದ್ರತಾಂಡವವಾಡುತ್ತಿದೆ. ಇಂದಂತೂ ಈ ಕೆಲವು ಜಿಲ್ಲೆಗಳಲ್ಲಿ ತಾಪಮಾನ ವಿಪರೀತ ಏರಿಕೆಯಾಗಲಿದ್ದು, ಬಿಸಿಲಿನಿಂದ ಹೈರಾಣಾಗಲಿದ್ದೀರಿ.
ಈ ವಾರಂತ್ಯಕ್ಕೆ ಕೆಲವು ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿದೆ. ಆದರೆ ಇಂದು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ವಿಪರೀತ ಬಿಸಿಲಿನ ವಾತಾವರಣ ಕಂಡುಬರಲಿದೆ. ಇಂದು ಯಾವುದೇ ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿಲ್ಲ ಎಂದು ಹವಾಮಾನ ವರದಿಗಳು ಹೇಳುತ್ತಿವೆ.
ಆದರೆ ವಿಜಯಪುರ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಂತೂ ಇಂದು ಗರಿಷ್ಠ ತಾಪಮಾನ 38 ಡಿಗ್ರಿಯಷ್ಟು ತಲುಪಲಿದ್ದು ವಿಪರೀತ ಬಿಸಿಲಿನ ವಾತಾವರಣವಿರಲಿದೆ. ಇನ್ನು ಉತ್ತರ ಕನ್ನಡ, ಬೀದರ್, ಗದಗ, ಕೊಪ್ಪಳ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿಯಷ್ಟು ಕಂಡುಬರುವುದು.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಹೊರಗೆ ಕಾಲಿಡಲಾಗದಷ್ಟು ಉರಿಬಿಸಿಲು ಕಂಡುಬರುತ್ತಿದ್ದು ಇಂದು ಗರಿಷ್ಠ ತಾಪಮಾನ 34 ಡಿಗ್ರಿಯಷ್ಟು ಕಂಡುಬರಲಿದೆ. ರಾಜ್ಯದ ಸರಾಸರಿ ಗರಿಷ್ಠ ತಾಪಮಾನ ಇಂದು 34 ಡಿಗ್ರಿಯಷ್ಟಿದ್ದರೆ ಕನಿಷ್ಠ ತಾಪಮಾನ 22 ಡಿಗ್ರಿಯಷ್ಟು ಕಂಡುಬರುವುದು.