ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ಅರಣ್ಯ ವಲಯದಲ್ಲಿ ಸಾವನ್ನಪ್ಪಿದ ಐದು ಹುಲಿಗಳ ಹಿಂದೆ ಧ್ವೇಷದ ಕಹಾನಿಯಿದೆ ಎನ್ನಲಾಗುತ್ತಿದೆ. ಹುಲಿಗಳಿಗೆ ವಿಷ ಪ್ರಾಷನ ಮಾಡಿರುವುದು ಖಚಿತವಾದ ಬೆನ್ನಲ್ಲೇ ಈಗ ಮತ್ತಷ್ಟು ವಿಚಾರಗಳು ಬಯಲಾಗುತ್ತಿದೆ.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹ್ಯೂಗಂ ವಲಯದಲ್ಲಿ ಐದು ಹುಲಿಗಳು ವಿಷಪ್ರಾಷನದಿಂದ ಏಕಕಾಲಕ್ಕೆ ಸಾವನ್ನಪ್ಪಿವೆ ಎನ್ನಲಾಗಿದೆ. ಸದ್ಯಕ್ಕೆ ಹುಲಿಗಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಪ್ರಾಥಮಿಕ ತನಿಖೆಯಿಂದ ವಿಷಪ್ರಾಷನವಾಗಿರುವುದು ಖಚಿತವಾಗಿದೆ ಎಂದು ಅಧಿಕಾರಿಗಳು ಹೇಳಿದ್ದರು. ಇದೀಗ ಹುಲಿಗಳ ಅಂಗಾಂಗ ಪರೀಕ್ಷೆ ನಡೆಸಲಾಗುತ್ತಿದೆ.
ಅಷ್ಟಕ್ಕೂ ಹುಲಿಗಳನ್ನು ಹೀಗೆ ಏಕಾಏಕಿ ಸಾಮೂಹಿಕವಾಗಿ ವಿಷ ಹಾಕಿ ಸಾಯಿಸಿರುವುದಕ್ಕೆ ಕಾರಣವೇನು ಎಂದು ಹುಡುಕುತ್ತಾ ಹೋದರೆ ಕಳೆದ ಒಂದು ತಿಂಗಳಲ್ಲಿ ನಡೆದ ಎರಡು ದುರಂತಗಳು ಎನ್ನಲಾಗುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಇಬ್ಬರು ಹುಲಿ ದಾಳಿಯಿಂದ ಸಾವನ್ನಪ್ಪಿದ್ದವು.
ಹೀಗಾಗಿ ಗ್ರಾಮಸ್ಥರೇ ವಿಷ ಹಾಕಿ ಹುಲಿಗಳನ್ನು ಸಾಯಿಸಿ ಸೇಡು ತೀರಿಸಿಕೊಂಡಿರಬಹುದು ಎನ್ನಲಾಗುತ್ತಿದೆ. ಬಿಳಿರಂಗನಬೆಟ್ಟ ಬಳಿ ರಂಗಮ್ಮ ಎಂಬ ವೃದ್ಧೆ ಮತ್ತು ಪುಟ್ಟಮ್ಮ ಎನ್ನುವ ಇನ್ನೋರ್ವ ಮಹಿಳೆ ಹುಲಿ ದಾಳಿಗೆ ಸಾವನ್ನಪ್ಪಿದ್ದರು. ಹೀಗಾಗಿ ಈ ದಾಳಿಗೆ ಗ್ರಾಮಸ್ಥರೇ ಕಾರಣವಿರಬಹುದೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ.