ನ್ಯಾಯಾಲಯದಲ್ಲೇ ಅಳಿಯನ ಮೇಲೆ ಮಚ್ಚು ಬೀಸಿದ ಮಾವ

ಶನಿವಾರ, 25 ಜೂನ್ 2016 (08:54 IST)
ಮಾವನೊಬ್ಬ ತನ್ನ ಅಳಿಯನ ಮೇಲೆ ನ್ಯಾಯಾಲಯದಲ್ಲೇ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
 
ಬೆಂಗಳೂರು ಮೂಲದ ಅಮೇರಿಕಾ ನಿವಾಸಿ ಎಂಜಿನಿಯರ್ ಶಶಿಕಿರಣ್ ಪ್ರಾಣಾಪಾಯದಿಂದ ಪಾರಾಗಿದ್ದು ಗಾಯಗೊಂಡಿರುವ ಅವರನ್ನು ಸದ್ಯ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಮಾವ ರಮೇಶ್ ಮತ್ತು ಆತನ ಸಹಚರರು ನಾಪತ್ತೆಯಾಗಿದ್ದಾರೆ. 
 
ಸೂಳೆಬೈಲಿನ ನಿವಾಸಿ ರಮೇಶ್ ಪುತ್ರಿ ಸೌಮ್ಯ ಅವರನ್ನು ಶಶಿಕಿರಣ್‍ಗೆ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ಬಳಿಕ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. ಆದರೆ ದಂಪತಿ ನಡುವೆ ಹೊಂದಾಣಿಕೆ ಇಲ್ಲದಿದ್ದುದರಿಂದ ಸೌಮ್ಯ ತವರಿಗೆ ಮರಳಿದ್ದಳು. 
 
ಬಳಿಕ ಶಶಿಕಿರಣ್ ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಶಶಿಕಿರಣ್ ಮತ್ತು ಸೌಮ್ಯ ಕಡೆಯವರು ವಿಚಾರಣೆಗೆಂದು ಶಿವಮೊಗ್ಗ ಸಿವಿಲ್ ನ್ಯಾಯಾಲಯಕ್ಕೆ ಬಂದಿದ್ದರು. 
 
ವಿಚಾರಣೆ ಬಳಿಕ ಹಿಂತಿರುಗುವಾಗ ಕೋರ್ಟ್ ಆವರಣದಲ್ಲಿ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿ ನಡೆದು ಸೌಮ್ಯಳ ತಂದೆ  ರಮೇಶ್ ಅಳಿಯ ಶಶಿಕಿರಣ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. 
 
ರಮೇಶ್ ವಿರುದ್ಧ ಜಯನಗರ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದ್ದು ಆತನಿಗಾಗಿ ಪೋಲೀಸರು ಶೋಧ ನಡೆಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ