ಸ್ವಿಸ್‌ ಬ್ಯಾಂಕ್‌ನ‌ಲ್ಲಿರುವ ಕಪ್ಪು ಹಣ ತರಲು ಮೋದಿಗೆ ಧೈರ್ಯ ಇಲ್ಲ: ಖರ್ಗೆ

ಶುಕ್ರವಾರ, 13 ಜನವರಿ 2017 (16:41 IST)
ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ಹೊರತರಲು ಪ್ರಧಾನಿ ನರೇಂದ್ರ ಮೋದಿಗೆ ಧೈರ್ಯ ಇಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ.
 
ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲುವ ಸ್ಥಿತಿ ಯಾವ ದೇಶದಲ್ಲೂ ಇಲ್ಲ. ಆದರೆ, ಭಾರತದಲ್ಲಿ ಬ್ಯಾಂಕ್‌ಗಳ ಮುಂದೆ ಕ್ಯೂ ನಿಲ್ಲುವ ಸ್ಥಿತಿ ಬಂದಿದೆ. ಕಪ್ಪು ಹಣ ತಡೆಗಟ್ಟುತ್ತೇನೆ ಎಂದು ಗರಿಷ್ಠ ಮುಖಬೆಲೆಯ ನೋಟು ನಿಷೇಧಿಸಿ 60 ದಿನ ಕಳೆದಿದೆ. ಆದರೂ ಸಹ ಸಮಸ್ಯೆಗಳು ತಪ್ಪುತ್ತಿಲ್ಲ ಎಂದು ಕೇಂದ್ರ ಸರಕಾರ ವಿರುದ್ಧ ವಾಗ್ದಾಳಿ ನಡೆಸಿದರು.
 
ಕಾಳಧನ, ಭ್ರಷ್ಟಚಾರ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ನಿರ್ಧಾರ ಸರಿಯಾಗಿದೆ. ಆದರೆ, ಪೂರ್ವ ಚಿಂತನೆ ಇಲ್ಲದೇ, ಏಕಾಏಕಿ 500, 1000 ಮುಖಬೆಲೆಯ ನೋಟುಗಳ ನಿಷೇಧ ಮಾಡಿರುವುದು ತಪ್ಪು. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
 
ಅಧಿಕಾರಕ್ಕೆ ಬಂದ ಮೇಲೆ ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ಹೊರತರುತ್ತೇನೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ, ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ಹೊರತರಲು ಪ್ರಧಾನಿಗೆ ಧೈರ್ಯ ಇಲ್ಲ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ