ಬೆಂಗಳೂರು: ಸಿಎಂ ಸಿದ್ದರಾಮಯ್ಯ ನಿನ್ನೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ಬಳಿಕ ಮತ್ತೊಮ್ಮೆ ಹೊಸದಾಗಿ ಜಾತಿಗಣತಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಹಾಗಿದ್ದರೆ ಇದಕ್ಕೆ ಮೊದಲು ಮಾಡಿದ್ದ 150 ಕೋಟಿ ದಂಡ ಆಯ್ತು ಎಂದಿದ್ದಾರೆ.
ರಾಜ್ಯ ಸರ್ಕಾರ ಇತ್ತೀಚೆಗೆ 10 ವರ್ಷಗಳ ಹಿಂದೆ ನಡೆಸಿದ್ದ ಜಾತಿಗಣತಿ ವರದಿಯನ್ನು ಪ್ರಕಟಿಸಿತ್ತು. ಈ ವರದಿ ಅಧಿಕೃತಗೊಳಿಸಲು ಸ್ವಪಕ್ಷೀಯರಿಂದಲೇ ಸಿಎಂ ಸಿದ್ದರಾಮಯ್ಯ ವಿರೋಧ ಎದುರಿಸಿದ್ದರು. ಈ ವರದಿಯಲ್ಲಿರುವ ಅಂಕಿ ಅಂಶಕ್ಕೂ ಈಗಿನ ಜಾತಿವಾರು ಜನಸಂಖ್ಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಪ್ರಮುಖವಾಗಿ ಲಿಂಗಾಯತ, ಒಕ್ಕಲಿಗ ಸಮುದಾಯದವರಿಂದ ವಿರೋಧ ವ್ಯಕ್ತವಾಗಿತ್ತು.
ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು ಇದಾದ ಬಳಿಕ ಮತ್ತೊಮ್ಮೆ ಜಾತಿಗಣತಿ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಹಳೆಯ ವರದಿಯನ್ನು ಕೈ ಬಿಟ್ಟು ಹೊಸದಾಗಿ ಗಣತಿ ಮಾಡಲಾಗುತ್ತದೆ ಎಂದಿದ್ದಾರೆ.
ಅವರ ಈ ಘೋಷಣೆಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಮೊದಲು ರಾಜ್ಯ ಸರ್ಕಾರ ಜಾತಿಗಣತಿ ಮಾಡಲು 150 ಕೋಟಿ ಖರ್ಚು ಮಾಡಿತ್ತು ಎಂದು ವರದಿಯಾಗಿತ್ತು. ಹಾಗಿದ್ದರೆ ಅಂದು ಖರ್ಚು ಮಾಡಿದ ಹಣ ವೇಸ್ಟ್ ಆಯ್ತು. ಇದನ್ನು ಹೇಗೆ ಮರಳಿ ಪಡೆಯುತ್ತೀರಿ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.