ಬೆಂಗಳೂರು: ರಾಜ್ಯಕ್ಕೆ ಅನುದಾನ ಬೇಕಿದ್ದರೆ ಸಿಎಂ ಸಿದ್ದರಾಮಯ್ಯನವರೇ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಗಳ ಬಳಿ ಮಾತನಾಡಲಿ ಎಂದು ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರಾಜ್ಯಕ್ಕೆ ಅನುದಾನ ಕೊರತೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರದ ಮೇಲೆ ಪದೇ ಪದೇ ಆಕ್ರೋಶ ವ್ಯಕ್ತಪಡಿಸುತ್ತಾರೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಈ ರೀತಿ ತಿರುಗೇಟು ಕೊಟ್ಟಿದ್ದಾರೆ. ಜನತೆ ಪರವಾಗಿ ಮುಖ್ಯಮಂತ್ರಿಗಳೇ ಮಾತನಾಡಲಿ ಎಂದಿದ್ದಾರೆ.
ಕೇಂದ್ರ ಹಣಕಾಸು ಆಯೋಗದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಬಾರಿ ಭಾಗಿಯಾಗಿದ್ದರು. ಬಳಿಕ ರಾಜ್ಯಕ್ಕೆ ಅನುದಾನ ಕೊಡುವಂತೆ ಮನವಿ ಸಲ್ಲಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಅವರು ರಾಜ್ಯಕ್ಕೆ ಅನುದಾನ ಸಾಕಾಗುತ್ತಿಲ್ಲ ಎಂದಿದ್ದರು.
ಇದಕ್ಕೀಗ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಈ ಬಾರಿಯಾದರೂ ಸಿಎಂ ಹಣಕಾಸು ಆಯೋಗದ ಸಭೆಗೆ ಹಾಜರಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇಷ್ಟು ದಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲಿಲ್ಲ. ಅನುದಾನ ಕೊರತೆಯಾಗಿದ್ದರೆ ರಾಜ್ಯದ ಜನತೆ ಪರವಾಗಿ ಪ್ರಧಾನಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಬೇಕು. ಕುಮಾರಸ್ವಾಮಿ ಕೂಡಾ ಸಿಎಂ ಜೊತೆ ನಿಂತು ಅನುದಾನ ಕೊಡಿಸುತ್ತಾರೆ. ಅದು ಬಿಟ್ಟು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದರೆ ಪ್ರಯೋಜನವಿಲ್ಲ ಎಂದಿದ್ದಾರೆ.