ಭಿನ್ನಮತೀಯ ಶಾಸಕರಿಗೆ ಜೆಡಿಎಸ್ ಗೇಟ್ ಬಂದ್: ಕುಮಾರಸ್ವಾಮಿ

ಬುಧವಾರ, 17 ಆಗಸ್ಟ್ 2016 (14:33 IST)
ಜೆಡಿಎಸ್ ಪಕ್ಷದ ಎಂಟು ಭಿನ್ನಮತೀಯ ಶಾಸಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. 
 
ರಾಮನಗರದ ರಾಂಪುರದೊಡ್ಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ನಿಯಮಾನುಸಾರವಾಗಿ ಎಂಟು ಭಿನ್ನಮತೀಯ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
 
ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕರು ಶ್ರೀಮಂತರಾಗಿಯೇ ಉಳಿಯಲಿ. ನನ್ನ ಬಳಿ ಬಂದು ಸಾಲಗಾರರಾಗುವುದು ಬೇಡ. ನನ್ನ ಜೊತೆ ಬರುವುದರಿಂದ ಅವರ ಬೀದಿಪಾಲಾಗುವುದು ಬೇಡ ಎಂದು ಹೇಳಿದರು. ಎಂಟು ಶಾಸಕರು ಮಾಡಿರುವ ತಪ್ಪು ಬೇರೆ, ಜಿ.ಟಿ.ದೇವೇಗೌಡ ಮಾಡಿರುವ ತಪ್ಪು ಬೇರೆಯಾಗಿದೆ. ಕೇವಲ ಹಣದ ವ್ಯಾಮೋಹವಿರುವವರು ನನ್ನ ಬಳಿ ಬರುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
 
ಕಳೆದ 50 ವರ್ಷಗಳಿಂದ ರಾಜ್ಯಕ್ಕೆ ಕೊಡುಗೆ ನೀಡಿರುವ ಪಕ್ಷದ ವರಿಷ್ಠರ ಕುರಿತು ಲಘುವಾಗಿ ಮಾತನಾಡುವವರನ್ನು ಇಟ್ಟುಕೊಂಡು ಏನು ಮಾಡಲು ಸಾಧ್ಯ. ಇವರಿಗೆ 10 ವರ್ಷಗಳಿಂದ ನನ್ನಿಂದ ಆದ ಅನ್ಯಾಯವಾದರು ಏನು? ಅವರು ನನಗೆ ಮಾಡಿರುವ ಲಾಭವಾದರು ಏನು ಎಂದು ಅವರೇ ವಿಮರ್ಶೆ ಮಾಡಿಕೊಳ್ಳಲಿ ಎಂದು  ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ