ಅಸ್ತಿತ್ವಕ್ಕೆ ಪೆಟ್ಟು ಬಿದ್ದಾಗ ದಲಿತ ಸಿಎಂ ಪ್ರಸ್ತಾಪ: ಪಿ.ರಾಜೀವ್

Krishnaveni K

ಮಂಗಳವಾರ, 24 ಫೆಬ್ರವರಿ 2026 (19:36 IST)
ಬೆಂಗಳೂರು: ಕಾಂಗ್ರೆಸ್ ಪಕ್ಷವು ದಲಿತರನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ಪ್ರಶಿಕ್ಷಣ ಅಭಿಯಾನದ ರಾಜ್ಯ ಸಂಚಾಲಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆರೋಪಿಸಿದ್ದಾರೆ. ತನ್ನ ಅಸ್ತಿತ್ವಕ್ಕೆ ಎಲ್ಲಿ ಪೆಟ್ಟು ಬೀಳುತ್ತದೋ ಆಗ ದಲಿತ ಸಿಎಂ ಎಂಬುದು ಬರುತ್ತದೆ ಎಂದು ವಿಶ್ಲೇಷಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರಶ್ನೆಗೆ ಉತ್ತರ ನೀಡಿದರು. ಕರ್ನಾಟಕದಲ್ಲೂ ತಮ್ಮ ಸ್ಥಾನಗಳಿಗೆ ಕುತ್ತು ಬಂದಾಗ, ಕಾಂಗ್ರೆಸ್ಸಿನಿಂದ ದಲಿತರು ದೂರ ಆಗುತ್ತಿದ್ದಾರೆ ಎಂದಾಗ ಈ ರೀತಿ ದಲಿತ ಸಿಎಂ ಕೂಗನ್ನು ಹರಿಬಿಡುತ್ತಾರೆ. ಮೂಗಿಗೆ ತುಪ್ಪ ಸವರುತ್ತಾರೆ. ಇವರಿಂದ ದಲಿತರಿಗೆ ಯಾವ ನ್ಯಾಯವೂ ಸಿಗುವುದಿಲ್ಲ ಎಂದು ತಿಳಿಸಿದರು.
 
ಬಿಜೆಪಿ ಸರಕಾರವು ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಕೊಟ್ಟಿದ್ದ ಅನುದಾನದ ಪ್ರಮಾಣವನ್ನೂ ಈಗ ದಲಿತ ಸಮುದಾಯಕ್ಕೆ ನೀಡುತ್ತಿಲ್ಲ. ಬಜೆಟ್ ಗಾತ್ರ ಮುಕ್ಕಾಲು ಜಾಸ್ತಿ ಆಗಿದೆ ಎಂದು ಗಮನ ಸೆಳೆದರು. ದಲಿತರಿಗೆ ಇಡೀ ದೇಶದಲ್ಲಿ ಕಾಂಗ್ರೆಸ್ಸೇತರ ಸರಕಾರಗಳಿಂದ ಹೆಚ್ಚಿನ ನ್ಯಾಯ ಸಿಕ್ಕಿದೆ ಎಂದು ನುಡಿದರು.
 
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ದಲಿತರಿಗೆ ಭೂ ಒಡೆತನ ಎಂಬುದು ಕರ್ನಾಟಕದಲ್ಲಿ ಇವತ್ತು ಕನಸಿನ ಮಾತಾಗಿದೆ. ಒಬ್ಬರೇ ಒಬ್ಬ ರೈತರಿಗೆ ಒಂದು ಗುಂಟೆ ಭೂಮಿಯನ್ನು ಈ ಸರಕಾರ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿ ಸರಕಾರ ಇದ್ದಾಗ, ಯಡಿಯೂರಪ್ಪ, ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿದ್ದಾಗ ಭೂ ಒಡೆತನ- ನಿವೇಶನ ಯೋಜನೆಯಡಿ ಎಷ್ಟು ಜನ ದಲಿತರು ಭೂಮಿಯ ಒಡೆಯರಾದರು; ಕಾಂಗ್ರೆಸ್ಸಿನ ಅವಧಿಯಲ್ಲಿ ಎಷ್ಟು ಜನ ಪ್ರಯೋಜನ ಪಡೆದಿದ್ದಾರೆಂದು ತೆಗೆದು ನೋಡಿ ಎಂದು ವಿನಂತಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ