ಪತ್ನಿ ಕೊಂದ, ಮಗಳನ್ನುಪತ್ನಿ ಕೊಂದ, ಮಗಳನ್ನು ಕೊಲ್ಲಲು ಯತ್ನಿಸಿದ ಪಾಪಿ ಅಪ್ಪ!

ಶುಕ್ರವಾರ, 24 ಜೂನ್ 2022 (11:25 IST)
ಬೆಂಗಳೂರು :  ಸಾಲ ಮಾಡಿದ್ದನ್ನು ಪ್ರಶ್ನಿಸಿದ ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆಗೈದು ಬಳಿಕ ಮಗಳ ಹತ್ಯೆಗೂ ಯತ್ನಿಸಿದ ಟೈಲರ್ ತಾನಾಗಿಯೇ ಪೊಲೀಸರಿಗೆ ಶರಣಾಗಿರುವ ಘಟನೆ ಯಶವಂತಪುರ ಸಮೀಪ ಬುಧವಾರ ಮುಂಜಾನೆ ನಡೆದಿದೆ.

ಮತ್ತಿಕೆರೆ ನಿವಾಸಿ ಅನುಸೂಯಾ (42) ಕೊಲೆಯಾದ ದುರ್ದೈವಿ. ತಂದೆಯಿಂದ ಚಾಕುವಿನಿಂದ ಇರಿತಕ್ಕೊಳಗಾಗಿರುವ ಸಹನಾ (14) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾಳೆ.

ಕೃತ್ಯ ಎಸಗಿದ ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಟೈಲರ್ ಧನೇಂದ್ರ ರೆಡ್ಡಿ (49) ಶರಣಾಗಿದ್ದಾನೆ.

17 ವರ್ಷಗಳ ಹಿಂದೆ ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಧನೇಂದ್ರ ರೆಡ್ಡಿ ಹಾಗೂ ಅನುಸೂಯಾ ವಿವಾಹವಾಗಿದ್ದು, ಯಶವಂತಪುರ ಸಮೀಪದ ಮತ್ತಿಕೆರೆಯಲ್ಲಿ ವಾಸವಾಗಿದ್ದರು. ದಂಪತಿಯ ಮಗಳು ಸಹನಾ 9ನೇ ತರಗತಿ ಓದುತ್ತಿದ್ದಳು.

ಮನೆ ಪಕ್ಕದಲ್ಲೇ ಇಬ್ಬರು ಟೈಲರಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚೆಗೆ ಪರಿಚಿತರ ಬಳಿ ರೆಡ್ಡಿ .2 ಲಕ್ಷ ಸಾಲ ಮಾಡಿದ್ದ. ಇದಕ್ಕೆ ಆಕ್ಷೇಪಿಸಿದ ಅನುಸೂಯಾ, ‘ಮನೆಯಲ್ಲಿ ತುಂಬಾ ಕಷ್ಟವಿದೆ. ಮುಂದೆ ಮಗಳ ಓದಿಗೆ ಹಣದ ಅವಶ್ಯಕತೆ ಇದೆ. ಹೀಗಿದ್ದರೂ ಸುಖಾಸುಮ್ಮನೆ ಸಾಲ ಮಾಡೋದು ಸರಿಯೇ’ ಎಂದು ಪತಿಯನ್ನು ಪ್ರಶ್ನಿಸುತ್ತಿದ್ದರು.

ಇದೇ ವಿಚಾರವಾಗಿ ದಂಪತಿ ಮಧ್ಯೆ ಮಂಗಳವಾರ ರಾತ್ರಿ ಜಗಳವಾಗಿದೆ. ಆಗ ಕೆರಳಿದ ರೆಡ್ಡಿ, ಊಟ ಮುಗಿಸಿ ಮಲಗಿದ ಬಳಿಕ ಪತ್ನಿ ಹಾಗೂ ಮಗಳನ್ನು ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಬುಧವಾರ ನಸುಕಿನ 4ರ ಸುಮಾರಿಗೆ ಪತ್ನಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಮಗಳಿಗೆ ಚಾಕುವಿನಿಂದ ಕುತ್ತಿಗೆ ಚುಚ್ಚಿದ್ದಾನೆ.

ಈ ಕೃತ್ಯ ಎಸಗಿದ ಬಳಿಕ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕೊಲೆ ಮಾಡಿರುವ ವಿಷಯ ತಿಳಿಸಿದ ನಂತರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ.

ಅಷ್ಟರಲ್ಲಿ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಯಶವಂತಪುರ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ಸಹನಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ