ಪಾವಗಡ: ಕರ್ನಾಟಕ ಬ್ಯಾಂಕ್‌ ಹಣ ರವಾನೆ ಘಟನೆಗೆ ಮತ್ತೊಂದು ಟ್ವಿಸ್ಟ್

ಗುರುವಾರ, 17 ನವೆಂಬರ್ 2016 (17:26 IST)
ಕಪ್ಪು ಹಣ ತಡೆಗಟ್ಟಲು 500, 1000 ರೂಪಾಯಿ ನೋಟ್‌ಗಳನ್ನು ಬ್ಯಾನ್ ಮಾಡಿರುವು ಹಿನ್ನೆಲೆಯಲ್ಲಿ ಜನಸಾಮನ್ಯರು ಕೇವಲ ನಾಲ್ಕು ಸಾವಿರ ರೂಪಾಯಿಗಾಗಿ ಎಟಿಎಂ ಕೇಂದ್ರದ ಬಳಿ ದಿನಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ, ಕೋಟಿ ಕೋಟಿ ಲೂಟಿ ಹೊಡೆದು ಹಣ ಸಂಪಾದಿಸಿರುವ ಲೂಟಿಕೋರರು ಹಣ ಬದಲಾಯಿಸಿಕೊಳ್ಳಲು ವಾಮಾಮಾರ್ಗ ಅನುಸರಿಸುತ್ತಿರುವ ಆಘಾತಕಾರಿ ಸುದ್ದಿ ತುಮಕೂರಿನ ಪಾವಗಡದಲ್ಲಿ ನಡೆದಿದೆ. 
 
ತುಮಕೂರು ಜಿಲ್ಲೆಯ ಪಾವಗಡದ ಕರ್ನಾಟಕ ಬ್ಯಾಂಕ್‌ನಲ್ಲಿ ಹಣ ಜಮಾ ಮಾಡಿ, ಬ್ಯಾಂಕಿನಿಂದ ನೂರು ಮತ್ತು ಐವತ್ತು ರೂಪಾಯಿ ನೋಟುಗಳ ಮೊತ್ತದ 60 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಹೋಗುತ್ತಿರುವದನ್ನು ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿಕೊಂಡಿರುವುದು ಸುದ್ದಿಯಾಗಿದೆ. 
 
ಕರ್ನಾಟಕ ಬ್ಯಾಂಕ್‌ನಿಂದ ಹಣ ತೆಗೆದುಕೊಂಡಿರುವ ವ್ಯಕ್ತಿ ಗುತ್ತಿಗೆದಾರರೊಬ್ಬರ ಆಪ್ತ ಎಂದು ಹೇಳಲಾಗುತ್ತಿದೆ. ಹಳೆಯ 500 ಹಾಗೂ 1000 ರೂಪಾಯಿ ನೋಟುಗಳನ್ನು ನೀಡಿ 100 ಹಾಗೂ 50 ರೂಪಾಯಿ ನೋಟ್‌ಗಳನ್ನು ಹೊತ್ತು ಹೋದರು ಎಂದು ಸಾರ್ವಜನಿಕರು ದೂರಿದ್ದಾರೆ. 
 
ಕಮೀಷನ್ ಮೂಲಕ ಬ್ಯಾಂಕಿನ ಮ್ಯಾನೇಜರ್ ಈ ಕರಾಳ ದಂದೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಬ್ಯಾಂಕ್ ಮ್ಯಾನೇಜರ್ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿಗಳ ಲಭ್ಯವಾಗಿದೆ.
 
ಆದರೆ, ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳಲ್ಲಿ ಸತ್ಯಾಂಶವಿಲ್ಲ. ನಮ್ಮಲ್ಲಿರುವ ವಾಹನಗಳ ಕೊರತೆಯಿಂದಾಗಿ ಗುತ್ತಿಗೆದಾರರ ಕಾರನ್ನು ಬಳಸಿಕೊಳ್ಳಲಾಯಿತು. ಕಾನೂನಿನ ಪ್ರಕಾರ ತಪ್ಪು. ಆದರೆ ಜನರಿಗೆ ಅಗತ್ಯವಾದ ಹಣ ಸಂದಾಯಿಸಬೇಕು ಎನ್ನುವ ಉದ್ದೇಶದಿಂದ ಆ ರೀತಿ ಮಾಡಲಾಗಿದೆ ಎಂದು ಬ್ಯಾಂಕ್‌ಎಜಿಎಂ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ