ಡಿಗ್ರಿ ಸರ್ಟಿಫಿಕೇಟ್ಗಳನ್ನು ಬೊಮ್ಮಾಯಿಗೆ ಪೋಸ್ಟ್ ಮಾಡಿ: ಡಿಕೆಶಿ

ಸೋಮವಾರ, 18 ಅಕ್ಟೋಬರ್ 2021 (18:27 IST)
ಹಾವೇರಿ : 'ಉದ್ಯೋಗ ಸೃಷ್ಟಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ನಿರುದ್ಯೋಗ ಸೃಷ್ಟಿಸಿತು. ಯುವಕರೇ ನಿಮ್ಮ ಡಿಗ್ರಿ ಸರ್ಟಿಫಿಕೇಟ್ಗಳನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪೋಸ್ಟ್ ಮಾಡಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಹಾನಗಲ್ ತಾಲ್ಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ಹಾನಗಲ್ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಒಂದು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಕೊರೊನಾ ಅವಧಿಯಲ್ಲಿ 4 ಕೋಟಿ ಉದ್ಯೋಗ ನಷ್ಟವಾಗಿದೆ. ಯಾವ ಮುಖ ಹೊತ್ತುಕೊಂಡು ಬಂದು ನಿಮ್ಮ ಬಳಿ ಓಟು ಕೇಳುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ನನ್ನನ್ನು 'ಡಿಕೆ, ಡಿಕೆ' ಅಂತ ಕೂಗಬೇಡಿ. ನೀವು ಒತ್ತುವ ಮತಯಂತ್ರದ ಬೀಪ್ ಶಬ್ದ ಮೋದಿ ಮತ್ತು ಬೊಮ್ಮಾಯಿ ಅವರಿಗೆ ಕೇಳಿಸಬೇಕು. ಆ ರೀತಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 36 ಮಂದಿ ಸತ್ತು ಹೋದ್ರು. ಸರ್ಕಾರ ಅವರಿಗೆ ಸಹಾಯ ಮಾಡೋಕೆ ಆಗಲಿಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ಮೃತರ ಮನೆಗಳಿಗೆ ಭೇಟಿ ನೀಡಿ, ₹1 ಲಕ್ಷ ಕೊಟ್ಟು ಬಂದಿದ್ದೇವೆ. ಹಾಸಿಗೆ, ಆಮ್ಲಜನಕ, ಚಿಕಿತ್ಸೆ ಸಮರ್ಪಕವಾಗಿ ಸಿಗದೆ ಕೋವಿಡ್ನಿಂದ ನೂರಾರು ಜನರು ಇಲಿಗಳ ರೀತಿ ನರಳಿ ನರಳಿ ಸತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ