ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ ಭರ್ಜರಿ ಕಾರ್ಯಕ್ರಮಗಳ ತಯಾರಿ

ಸೋಮವಾರ, 26 ಸೆಪ್ಟಂಬರ್ 2022 (14:40 IST)
ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲಿಸಿದರು.
ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಾಲಯ, ವೇದಿಕೆ, ವಿಶ್ರಾಂತಿ ಕೊಠಡಿ, ಪಾರ್ಕಿಂಗ್ ಜಾಗ, ಸಾರ್ವಜನಿಕರು ಆಸೀನರಾಗುವ ವೇದಿಕೆ ನಿರ್ಮಾಣ ಕಾರ್ಯ ಮುಂತಾದವುಗಳ ಅಂತಿಮ ಹಂತದ ತಯಾರಿಯನ್ನು ವೀಕ್ಷಿಸಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸಚಿವರಿಗೆ ಸಿದ್ಧತೆಗಳ ಬಗ್ಗೆ ವಿವರಿಸಿದರು.
 
ಬಳಿಕ ಮಾತನಾಡಿದ ಸಚಿವರು, ರಾಷ್ಟ್ರಪತಿಗಳು ಮೈಸೂರು ವಿಮಾನ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ನೇರವಾಗಿ ಬಂದಿಳಿಯಲಿದ್ದಾರೆ. ವೇದಿಕೆಯಲ್ಲಿ ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು ಸೇರಿ ೧೩ ಮಂದಿಗೆ ಅವಕಾಶವಿದೆ. ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮತ್ತೊಂದು ಕಡೆ ವೇದಿಕೆ ಇರುತ್ತದೆ. ರಾಷ್ಟ್ರಪತಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ಚಾಮರಾಜನಗರ, ಮಡಿಕೇರಿ ಭಾಗದ ೧೪ ಮಂದಿ ಆದಿವಾಸಿಗಳೊಂದಿಗೆ ಫೋಟೋ ಸೆಷನ್‌ಗೆ ಹತ್ತು ನಿಮಿಷಗಳ ಕಾಲ ಸಮಯ ಕೊಡುವಂತೆ ಕೇಳಿದ ಮನವಿಗೆ ಒಪ್ಪಿದ್ದು, ದೇವಸ್ಥಾನದ ಬಲಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ