ಡಿಐಜಿ ರೂಪಾಗೆ ಮಾಹಿತಿ ಕೊಟ್ಟ ಕೈದಿಯ ಮರ್ಮಾಂಗಕ್ಕೆ ಒದ್ದರಾ..?

ಬುಧವಾರ, 19 ಜುಲೈ 2017 (11:15 IST)
ಡಿಐಜಿ ರೂಪಾ ಅವರಿಗೆ ಪರಪ್ಪನ ಅಗ್ರಹಾರ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದ ಕೈದಿಗೆ ಮರ್ಮಾಂಗಕ್ಕೆ ಒದ್ದಿರುವ ಆರೋಪ ಕೇಳಿಬಂದಿದೆ. ಕೈದಿ ಅನಂತ ಮೂರ್ತಿ ಎಂಬುವವರಿಗೆ ಮರ್ಮಾಂಗಕ್ಕೆ ಒದ್ದಿದ್ದು, ಅಸ್ವಸ್ಥ ಕೈದಿಯನ್ನ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.

ಡಿಐಜಿ ಮಾಹಿತಿ ಕೊಟ್ಟ ಬಳಿಕ ಕೈದಿಗಳ ಮೇಲೆ ಹಲ್ಲೆ ನಡೆಸಿ ಮೂವರು ಕೈದಿಗಳನ್ನ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಕೈದಿಯನ್ನ ಶಿಫ್ಟ್ ಮಾಡುವುದಕ್ಕೂ ಮುನ್ನ ಕೈದಿ ಅನಂತಮೂರ್ತಿಯ ಮರ್ಮಾಂಗಕ್ಕೆ ಒದೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಕೈದಿಯ ಮರ್ಮಾಂಗದ ರಕ್ತ ಹೆಪ್ಪುಗಟ್ಟಿದ್ದು ಕೈದಿ ನಡೆದಾಡಲು ಕಷ್ಟಪಡುತ್ತಿರುವ ದೃಶ್ಯಗಳನ್ನ ಮಾಧ್ಯಮಗಳು ಪ್ರಸಾರ ಮಾಡಿವೆ.

ಈ ಮಧ್ಯೆ ಅಸ್ವಸ್ಥ ಕೈದಿಯ ಬಗ್ಗೆ ಸಂಬಂಧಿಕರಿಗೂ ಮಾಹಿತಿ ನೀಡಿಲ್ಲ. ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಗೊಂಡಿರುವ ಕೈದಿಗಳನ್ನ ಸಂಪರ್ಕಿಸಲು ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ