ನಾನು, ಖಮರುಲ್ ಸೇರಿ ಖರ್ಗೆಯನ್ನು ಸೋಲಿಸುತ್ತೇವೆ: ಚಿಂಚನಸೂರು
ಭಾನುವಾರ, 19 ಜೂನ್ 2016 (17:19 IST)
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ನನಗೆ ಮೋಸ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಖಮರುಲ್ ಇಸ್ಲಾಂ ಅವರೊಂದಿಗೆ ಸೇರಿ ಖರ್ಗೆಯವರನ್ನು ಸೋಲಿಸುತ್ತೇನೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನ್ಸೂರ್ ಪ್ರತಿಜ್ಞೆಗೈದಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿಹೋಗಿದ್ದರಿಂದ ರೌದ್ರಾವತಾರ ತಾಳಿದ್ದ ಚಿಂಚನ್ಸೂರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವು ಕೂಡಾ ನನಗೆ ಕೈ ಕೊಟ್ಟಿದ್ದೀರಿ. ಎಲ್ಲರನ್ನು ನೋಡಿಕೊಳ್ಳುತ್ತೇನೆ ಎಂದು ಗುಡುಗಿದ್ದಾರೆ.
ನನ್ನ ಸಮಾಜದಲ್ಲಿ 50 ಲಕ್ಷ ಜನರಿದ್ದಾರೆ. ನನ್ನನ್ನು ದೇವರೆಂದು ತಿಳಿಯುತ್ತಾರೆ. ಮುಂದಿನ ಚುನಾವಣೆಯಲ್ಲಿ ಖರ್ಗೆ ವಿರುದ್ಧ ಮತ ಚಲಾಯಿಸುತ್ತಾರೆ. ಮುಂಬರುವ ದಿನಗಳಲ್ಲಿ ನನ್ನ ತಾಕತ್ತು ಏನೆಂದು ಗೊತ್ತಾಗಲಿದೆ ಎಂದು ಸವಾಲ್ ಹಾಕಿದರು.
ಚಿಂಚನ್ಸೂರ್ ರೌದ್ರಾವತಾರ ಕಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಏನಯ್ಯ ಏನ್ ಮಾತಾಡ್ತಿದ್ದೀಯಾ? ಸ್ವಲ್ಪ ತಾಳ್ಮೆ ಇರಲಿ ಎಂದು ಸಮಾಧಾನ ಮಾಡಲು ಯತ್ನಿಸಿದರೂ ಚಿಂಚನ್ಸೂರ್ ಮಾತ್ರ ಸಮಾಧಾನಗೊಳ್ಳಲಿಲ್ಲ ಎನ್ನಲಾಗಿದೆ.
ಮುಖ್ಯಮಂತ್ರಿ ನಿವಾಸದಲ್ಲಿ ಅನೇಕ ಶಾಸಕರು ಸಚಿವರು ಬಾಬುರಾವ್ ಚಿಂಚನ್ಸೂರ್ ರೌದ್ರಾವತಾರ ಕಂಡು ಬೆಚ್ಚಿಬಿದ್ದರು ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ