ಚಿಕನ್ ಸಾಂಬಾರ್‌ಗಾಗಿ ಜಗಳ, ಕೊಲೆಯಲ್ಲಿ ಅಂತ್ಯ!

ಶುಕ್ರವಾರ, 10 ಜೂನ್ 2022 (12:44 IST)
ದಾವಣಗೆರೆ : ಸಂಸಾರದಲ್ಲಿ ಎಲ್ಲವು ಸರಿ ಇದ್ದರೆ ಸುಖವಾಗಿ ಇರುತ್ತದೆ.
 
ಏನಾದರೂ ಅನುಮಾನ ಮನಸ್ತಾಪಗಳು ಬಂದರೆ ನಿಜಕ್ಕೂ ನರಕವಾಗುತ್ತದೆ. ಸಂಸಾರದಲ್ಲಿ ಮನಸ್ತಾಪಗಳು ಬಂದು ಜೀವವನ್ನು ಕಳೆದುಕೊಳ್ಳುವಂತಾಗುತ್ತದೆ.

ಅದೇ ರೀತಿ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿ ಕೋಡು ಗ್ರಾಮದಲ್ಲಿ ಗಂಡ ಹೆಂಡತಿಯ ನಡುವೆ ಚಿಕನ್ ಊಟದ ವಿಚಾರವಾಗಿ ಜಗಳವಾಗಿ ತಾರಕಕ್ಕೇ ಏರಿ ತನ್ನ ಹೆಂಡತಿಯನ್ನು ಪತಿಯೇ ಚಾಕುವಿನಿಂದ ಹಿರಿದುಕೊಲೆ ಮಾಡಿದ್ದಾನೆ.

ಕೊಲೆಯಾದ ದುರ್ದೈಯನ್ನು ಶೀಲಾ ಎಂದು ಗುರುತಿಸಲಾಗಿದ್ದು, ಈಕೆಗೆ ಬನ್ನಿಕೋಡು ಗ್ರಾಮದ ರೋಡ್ ರೋಲರ್ ಆಪರೇಟರ್ ಆಗಿದ್ದ ಕೆಂಚಪ್ಪ ಜೊತೆ 9 ವರ್ಷಗಳ ಹಿಂದೆ ಮದುವೆಯಾಗಿತ್ತು.

ಹರಿಹರ ತಾಲೂಕಿನ ವಾಸನ ಗ್ರಾಮದ ಶೀಲಾಳನ್ನು ಕೆಂಚಪ್ಪ ಪ್ರೀತಿಸಿದ್ದು, ಮನೆಯವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನೆಯಿಂದ ಓಡಿ ಬಂದು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಹೇಗೋ ಸುಖವಾಗಿ ಸಂಸಾರ ಮಾಡಿ ಒಂದು ಮುದ್ದಾದ ಮಗುವನ್ನು ಪಡೆದಿದ್ದರು.

ಆಗ ಕೆಂಚಪ್ಪನ ಅಸಲಿ ಸತ್ಯ ಗೊತ್ತಾಗಿದೆ. ಕೆಂಚಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಆಕೆಗೆ ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ತನ್ನನ್ನು ಮದುವೆಯಾಗಿರುವ ವಿಚಾರ ಶೀಲಾಗೆ ತಿಳಿದು ಬಂದಿದೆ. ಇದರಿಂದ ಪ್ರತಿನಿತ್ಯ ಜಗಳ ಶುರುವಾಗಿದೆ.

ಕೆಂಚಪ್ಪ ಕೂಡ ಮದ್ಯ ಸೇವನೆ ಮಾಡಿ ರಾದ್ಧಾಂತ ಮಾಡುತ್ತಿದ್ದ, ಇದು ಎರಡು ಮನೆಯವರಿಗೆ ಗೊತ್ತಾಗಿ ರಾಜೀ ಪಂಚಾಯಿತಿ ಮಾಡಿ ಹೋಗಿದ್ದರು. ಆದರೆ ಕಳೆದ ರಾತ್ರಿ ಮದ್ಯ ಸೇವನೆ ಮಾಡಿ ಬಂದ ಕೆಂಚಪ್ಪ ಹೆಂಡತಿಗೆ ಚಿಕನ್ ಅಡುಗೆ ಮಾಡಿಲ್ಲ ಎಂದು ಜಗಳವಾಡಿ ಕೊನೆಗೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ