ಹಿಂದೂಗಳಲ್ಲಿ ಯಾರೂ ಬಡವರಿಲ್ವಾ, ಮುಸ್ಲಿಮರು ಮಾತ್ರ ಬಡವರಾ: ಆರ್ ಅಶೋಕ್

Krishnaveni K

ಬುಧವಾರ, 5 ಮಾರ್ಚ್ 2025 (15:50 IST)
ಬೆಂಗಳೂರು: ಹಿಂದೂಗಳಲ್ಲಿ ಯಾರೂ ಬಡವರಿಲ್ವಾ, ಮುಸ್ಲಿಮರು ಮಾತ್ರ ಬಡವರಾ ಎಂದು ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರೀ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ನೀಡುವ ವಿಚಾರ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ಬಿಜೆಪಿ ಈಗ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸದನದಲ್ಲೂ ಹೋರಾಟದ ಎಚ್ಚರಿಕೆ ನೀಡಿದೆ.

ಸರ್ಕಾರೀ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಗುತ್ತಿಗೆ ನೀಡಬೇಕು ಎಂಬ ವಿಚಾರ ಹಲವು ದಿನಗಳಿಂದ ಸಿಎಂ ಮುಂದೆ ಪ್ರಸ್ತಾವನೆ ಇಡಲಾಗಿತ್ತು. ಆದರೆ ಅದಾದ ಬಳಿಕ ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಇದನ್ನೇ ಬಿಜೆಪಿ ದಾಳವಾಗಿ ಬಳಸಿಕೊಳ್ಳಬಹುದು ಎಂಬ ಕಾರಣಕ್ಕೆ ಸರ್ಕಾರ ಆ ಪ್ರಸ್ತಾವನೆಯನ್ನು ಮುಂದೆ ಹಾಕಿತ್ತು.

ಆದರೆ ಇದೀಗ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದಲ್ಲೇ ಅಂತಹದ್ದೊಂದು ಬಿಲ್ ಪಾಸ್ ಮಾಡಲು ಸರ್ಕಾರ ಮುಂದಾಗಿದೆ. ಮುಸ್ಲಿಮರು ಬಡವರಿದ್ದಾರೆ, ಆರ್ಥಿಕವಾಗಿ ಅವರೂ ಮುಂದೆ ಬರಲಿ ಎಂದು ಈ ಮೀಸಲು ನೀಡುತ್ತಿದ್ದೇವೆ ಎಂದು ಸರ್ಕಾರ ಸಮಜಾಯಿಷಿ ನೀಡಿದೆ.

ಆದರೆ ಇದರ ವಿರುದ್ಧ ಹರಿಹಾಯ್ದಿರುವ ವಿಪಕ್ಷ ನಾಯಕ ಆರ್ ಅಶೋಕ್, ‘ಹಾಗಿದ್ರೆ ಹಿಂದೂಗಳಲ್ಲಿ ಬಡವರಿಲ್ವಾ, ಪಾರ್ಸಿಗಳಲ್ಲಿ ಇಲ್ವಾ, ಅಲ್ಪ ಸಂಖ್ಯಾತರು ಎಂದರೆ ಮುಸ್ಲಿಮರು ಮಾತ್ರವಾ? ಇದೆಲ್ಲಾ ವೋಟ್ ಬ್ಯಾಂಕ್ ಗಾಗಿ ಸಂವಿಧಾನ ವಿರುದ್ಧವಾಗಿ ನೀಡುತ್ತಿರುವ ಮೀಸಲಾತಿ. ಅಂತಹದ್ದೊಂದು ಬಿಲ್ ತಂದರೆ ನಾವು ಉಗ್ರ ಹೋರಾಟ ನಡೆಸಲಿದ್ದೇವೆ. ನಮ್ಮ ಸರ್ಕಾರ ಬಂದ ಕೂಡಲೇ ಇಂತಹದ್ದೊಂದು ಮೀಸಲಾತಿ ತೆಗೆದು ಹಾಕುತ್ತೇವೆ’ ಎಂದು ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ