ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಸಣ್ಣವರಾಗಬೇಡಿ: ಸಿದ್ದರಾಮಯ್ಯಗೆ ಅಶೋಕ್ ಟಾಂಗ್

Krishnaveni K

ಗುರುವಾರ, 2 ಏಪ್ರಿಲ್ 2026 (10:37 IST)
ಬೆಂಗಳೂರು: ರಾಜ್ಯ ಮತ್ತು ಕೇಂದ್ರದ ಆರ್ಥಿಕತೆ ಬಗ್ಗೆ ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಸಣ್ಣವರಾಗಬೇಡಿ ಎಂದು ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ.
 
ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ಅನುದಾನ ಸಿಗುತ್ತಿಲ್ಲ, ರಾಜ್ಯದ ಬಜೆಟ್ ಕೇಂದ್ರದ ಬಜೆಟ್ ಗಿಂತಲೂ ಉತ್ತಮ ಎಂದು ಸಿಎಂ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದೀಗ ಯುಪಿಎ ಅವಧಿಗಿಂತಲೂ ಎನ್ ಡಿಎ ಅವಧಿಯಲ್ಲಿ ರಾಜ್ಯಕ್ಕೆ ಹೆಚ್ಚು ಅನುದಾನ ಸಿಕ್ಕಿದೆ ಎಂಬ ವರದಿಗಳನ್ನು ಉಲ್ಲೇಖಿಸಿ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
 
‘ಒಂದು ಸುಳ್ಳನ್ನ ನೂರು ಬಾರಿ ಅಲ್ಲ, ಸಾವಿರ ಬಾರಿ ಹೇಳಿದರೂ ಅದು ಸತ್ಯವಾಗುವುದಿಲ್ಲ. ತೆರಿಗೆ ಹಂಚಿಕೆ ಹೇಗೆ ನಡೆಯುತ್ತದೆ, ಅದಕ್ಕಿರುವ ಮಾನದಂಡಗಳು ಏನು, ಇವೆಲ್ಲಾ ತಮಗೆ ಚೆನ್ನಾಗಿ ಗೊತ್ತು. ಯುಪಿಎ ಅವಧಿಗೆ ಹೋಲಿಸಿದರೆ ಎನ್ ಡಿಎ ಅವಧಿಯಲ್ಲಿ ಕರ್ನಾಟಕಕ್ಕೆ 3 ಪಟ್ಟು ಹೆಚ್ಚು ಹಣ ದೊರೆತಿದೆ ಎನ್ನುವ ಸತ್ಯ ನಿಮಗೂ ಗೊತ್ತು.
 
ಎರಡೆರಡು ಬಾರಿ ಮುಖ್ಯಮಂತ್ರಿ ಆಗಿರುವ ತಮ್ಮಂತಹವರು ಕೇವಲ ಹೈಕಮಾಂಡ್ ನಾಯಕರ ಮೆಚ್ಚುಗೆಗಾಗಿ ಪದೇ ಪದೇ ಇಲ್ಲಸಲ್ಲದ ಆರೋಪ ಮಾಡಿ ರಾಜ್ಯದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುವುದು ತಮಗೆ ಶೋಭೆ ತರುವುದಿಲ್ಲ.
 
ಪಾಪ ಕಾಂಗ್ರೆಸ್ ಪಕ್ಷದ ಇನ್ನುಳಿದ ನಾಯಕರಿಗೇನೋ ಅನಿವಾರ್ಯ. ಇಷ್ಟ ಇದೆಯೋ ಇಲ್ಲವೋ ಅಧಿಕಾರಕ್ಕಾಗಿ ವಿಧಿ ಇಲ್ಲದೆ ನಕಲಿ ಗಾಂಧಿ ಕುಟುಂಬದ ಗುಲಾಮಗಿರಿ ಮಾಡಿಕೊಂಡಿದ್ದಾರೆ. ಆದರೆ ತಮಗೆ, ಅದೂ ಇಂದೋ ನಾಳೆಯೋ ಕುರ್ಚಿ ಬಿಡುವ ಪರಿಸ್ಥಿತಿಯಲ್ಲಿರುವ ತಮಗೆ ಹೈಕಮಾಂಡ್ ಮುಲಾಜು ಏಕೆ? ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದೀರಾ?
 
ಒಟ್ಟಿನಲ್ಲಿ ತಮ್ಮ ಮೊದಲ ಅವಧಿಯಲ್ಲಿದ್ದ ಗತ್ತು, ಗಾಂಭೀರ್ಯ, ಆತ್ಮವಿಶ್ವಾಸ ಇವ್ಯಾವುದೂ ಈಗ ತಮ್ಮಲ್ಲಿ ಕಾಣುತ್ತಿಲ್ಲ. ಜನತಾ ಪರಿವಾರದಿಂದ, ಸಮಾಜವಾದಿ ಹಿನ್ನೆಲೆಯಿಂದ ಬಂದ ತಮಗೆ ಈ ರೀತಿ ಕುರ್ಚಿಗಾಗಿ, ಮಗನ ಭವಿಷ್ಯಕ್ಕಾಗಿ, ನಕಲಿ ಗಾಂಧಿ ಕುಟುಂಬದ ಓಲೈಕೆ ಮಾಡುವ ಪರಿಸ್ಥಿತಿ ಬರಬಾರದಿತ್ತು.
 
ರಾಜಕೀಯ ಜೀವನದ ಸಂಧ್ಯಾ ಕಾಲದಲ್ಲಿ ನಿಮಗೆ ಬಂದಿರುವ ಈ ದುಸ್ಥಿತಿ ಬಗ್ಗೆ ನನಗೆ ಕನಿಕರವಿದೆ. ಆದರೆ ಸುಳ್ಳಿನ ಮೇಲೆ ಸುಳ್ಳು ಹೇಳಿ ತಮ್ಮ ವರ್ಚಸ್ಸಿಗೆ ತಾವೇ ಇನ್ನಷ್ಟು ಮಸಿ ಬಳಿಸಿಕೊಳ್ಳಬೇಡಿ. ಪ್ರಜ್ಞಾವಂತ ಕನ್ನಡಿಗರ ಮುಂದೆ ಇನ್ನಷ್ಟು ಸಣ್ಣವರಾಗಬೇಡಿ’ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ