ಸಂಪುಟ ರಚನೆಯಲ್ಲಿ ರೆಡ್ಡಿ ಸಮುದಾಯದ ಕಡೆಗಣನೆ – ಶನಿವಾರದಂದು ಬೃಹತ್‌ ಪ್ರತಿಭಟನೆಗೆ ಕರೆ

ಶುಕ್ರವಾರ, 6 ಆಗಸ್ಟ್ 2021 (19:55 IST)
ಬೆಂಗಳೂರು ಆಗಸ್ಟ್‌ 06: ಬಿಜೆಪಿ ಇತ್ತೀಚಿನ ಸಂಪುಟ ರಚನೆಯಲ್ಲಿ ರೆಡ್ಡಿ ಸಮುದಾಯವನ್ನು ಕಡೆಗಣಿಸಿ, ನಮ್ಮ ಯಾವುದೇ ಶಾಸಕರಿಗೆ ಸಚಿವ ಸ್ಥಾನ ನೀಡದೆ ಇರುವುದಕ್ಕೆ ರೆಡ್ಡಿ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬಗ್ಗೆ ತಮ್ಮ ಸಮುದಾಯದ ಸಂಘಟಿತ ಧ್ವನಿಯನ್ನು ಎತ್ತುವ ದೃಷ್ಟಿಯಿಂದ ಆಗಸ್ಟ್‌ 7 ಶನಿವಾರದಂದು ಬೆಳಿಗ್ಗೆ 10.30 ಗಂಟೆಯಿಂದ ಶಾಂತಿಯುತವಾಗಿ ಬೃಹತ್‌ ಪ್ರತಿಭಟನೆ ಮಾಡಲು ಕರೆಯನ್ನು ನೀಡಿದ್ದಾರೆ. 
 
ರೆಡ್ಡಿ ಸಮುದಾಯವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದೆ. ನಮ್ಮ ಸಮುದಾಯದ ದಿವಂಗತ ಕೆ.ಸಿ.ರೆಡ್ಡಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸದ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಸಮುದಾಯಕ್ಕೆ ಅನ್ಯಾಯವೆಸಗಿರುವ ಕಾರಣ ಇದೆ ಆಗಸ್ಟ್ 7, ಶನಿವಾರದಂದು, ನಮ್ಮ ಕೋರಮಂಗಲದ ರೆಡ್ಡಿ ವೇಮನ ಸಂಘದ ಆವರಣದ ಮುಂಭಾಗದಲ್ಲಿ ಸಮುದಾಯಕ್ಕೆಸಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ರೆಡ್ಡಿ ಸಮುದಾಯದ ಎಲ್ಲಾ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಂಘದ ವತಿಯಿಂದ ವಿನಂತಿಸಿಕೊಳ್ಳಲಾಗಿದೆ. ಬಿಜೆಪಿ ಹೈ ಕಮಾಂಡ್ ಕೂಡಲೇ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸುತ್ತೇವೆ. ಪ್ರತಿಭಟನೆ ಶಾಂತಿಯುತವಾಗಿ, ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು, ಸಾರ್ವಜನಿಕರಿಗೆ ತೊಂದರೆ ಯಾಗದೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ರೆಡ್ಡಿ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ