ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಖಡಕ್ ಪತ್ರ!

ಗುರುವಾರ, 12 ಜುಲೈ 2018 (09:08 IST)
ಬೆಂಗಳೂರು: ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಳಿ ಬಂದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿಗೆ ಖಡಕ್ ಆಗಿ ಪತ್ರ ಬರೆದಿದ್ದಾರೆ.

ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕರು, ಬಜೆಟ್ ನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಅನ್ನಭಾಗ್ಯ ಯೋಜನೆಗೆ ಕತ್ತರಿ ಹಾಕಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಭೆ ಬಳಿಕ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ಆ ಪತ್ರದ ಸಾರಾಂಶ ಹೀಗಿದೆ. ಅನ್ನಭಾಗ್ಯ ಯೋಜನೆ ಎಂಬುದು ಬಡವರ ಹಸಿವು ನೀಗಿಸುವ ಯೋಜನೆ ಎಂದು ನಂಬಿದ್ದೇನೆ. ಇದರ ಜತೆಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಇದಕ್ಕೆ ತಗುಲುವ ವೆಚ್ಚವೂ ದುಬಾರಿಯಲ್ಲ. ಈ ಯೋಜನೆ ಜಾತಿ, ಧರ್ಮ ಮೀರಿ ಎಲ್ಲಾ ವರ್ಗದವರನ್ನೂ ತಲುಪುತ್ತದೆ.

ಆಹಾರದ ಹಕ್ಕನ್ನು ನೀಡಿದ ತೃಪ್ತಿ ನನಗಿದೆ. ಹಸಿವು ಮುಕ್ತ ಕರ್ನಾಟಕ ಈ ಯೋಜನೆಯಿಂದ ಯಶಸ್ವಿಯಾಗಿದೆ. ಇಂತಹ ಪರಿಸ್ಥಿತಿ ಇರುವಾಗ ಅನ್ನ ಭಾಗ್ಯ ಯೋಜನೆಯಲ್ಲಿ ಎರಡು ಕೆ.ಜಿ. ಅಕ್ಕಿ ಕಡಿತಗೊಳಿಸಿರುವುದು ನನಗೆ ಅಚ್ಚರಿಯಾಗಿದೆ. ಇದರಿಂದ 600 ರಿಂದ 700 ಕೋಟಿ ರೂ. ಉಳಿತಾಯ ಮಾಡಬಹುದಾಗಿದೆ ಅಷ್ಟೆ. ಆದರೆ ಇದರಿಂದ ಹಲವು ಬಡವರು ಕಷ್ಟಪಡಬೇಕಾಗುತ್ತದೆ.

ಇನ್ನು ಪೆಟ್ರೋಲ್ –ಡೀಸೆಲ್ ಬೆಲೆ ಏರಿಕೆ ವಿರುದ್ಧ ನಮ್ಮ ಪಕ್ಷ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲೂ ಇದೇ ವಿಚಾರದಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಿ ಗೆದ್ದಿದ್ದೇವೆ. ಹೀಗಿರುವಾಗ ಸಮ್ಮಿಶ್ರ ಸರ್ಕಾರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದರೆ ಹೇಗೆ? ಈ ನಿರ್ಧಾರಗಳನ್ನು ಮರುಪರಿಶೀಲಿಸಲು ಕೋರುತ್ತೇನೆ’ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಖಡಕ್ ಆಗಿ ಹೇಳಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಯಾವ ರೀತಿ ಸ್ಪಂದಿಸುತ್ತಾರೆ ನೋಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ