ರಾಜ್ಯ ಬಜೆಟ್: ಚುನಾವಣೆ ದೃಷ್ಟಿಯಿಂದ ಜನಪ್ರಿಯ ಬಜೆಟ್ ಮಂಡಿಸುತ್ತಾರಾ ಸಿದ್ದರಾಮಯ್ಯ..?

ಮಂಗಳವಾರ, 14 ಮಾರ್ಚ್ 2017 (16:14 IST)
ರಾಜ್ಯಾದ್ಯಂತ ಬರದ ಛಾಯೆ, ಜನರಷ್ಟೇ ಅಲ್ಲ, ನೀರು ಆಹಾರಕ್ಕಾಗಿ ಪ್ರಾಣಿಗಳ ಪರದಾಟ. ಬೆಳೆದ ಬೆಳೆ ಹಾಳಾಗಿ ಸಾಲ ತೀರಿಸಲಾಗದೇ ದಿಕ್ಕೆಟ್ಟಿರುವ ರೈತ ಹೀಗೆ ಹತ್ತು ಹಲವು ಸವಾಲುಗಳ ನಡುವೆ ನಾಳೆ ಸಿಎಂ ಸಿದ್ದರಾಮಯ್ಯ ರಾಜ್ಯ ಹಣಕಾಸು ಬಜೆಟ್ ಮಂಡಿಸುತ್ತಿದ್ದಾರೆ.

ರಾಜ್ಯದ 2 ಕ್ಷೇತ್ರಗಳ ಉಪಚುನಾವಣೆ, ಮುಂದಿನ ವರ್ಷ ರಾಜ್ಯ ವಿಧಾನಸಭೆ ಗುರಿಯಾಗಿಸಿಕೊಂಡು ಸಿಎಂ ಸಿದ್ದರಾಮಯ್ಯ ಜನಪ್ರಿಯ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಗದ್ದುಗೆ ಏರಲು ಸಾಧ್ಯವಾಗಿಲ್ಲ. ಹೀಗಾಗಿ, ಕೈಯಲ್ಲಿರುವ ದೊಡ್ಡ ರಾಜ್ಯ ಕರ್ನಾಟಕವಾಗಿದ್ದು, ಇಲ್ಲಿ ಅಧಿಕಾರ ಉಳಿಸಿಕೊಳ್ಳುವ ಒತ್ತಡದಲ್ಲಿದೆ ಕಾಂಗ್ರೆಸ್. ಹೀಗಾಗಿ, ಸಿಎಂ ಜನರ ಓಲೈಕೆಗೆ ಮುಂದಾಗುವ ಎಲ್ಲ ಸಾಧ್ಯತೆ ಇದೆ.
ಈಗಾಗಲೇ ಸಿಎಂ ಮಂಗಳವಾರವೇ ಬರದಿಂದ ಕಂಗೆಟ್ಟಿರುವ ರೈತರಿಗೆ ಪರಿಹಾರವಾಗಿ 671 ಕೋಟಿ ರೂಪಾಯಿ ರಿಲೀಸ್ ಮಾಡಿದ್ದಾರೆ.

ರೈತರ ಸಾಲ ಮನ್ನಾ..?: ರಾಜ್ಯದಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ರೈತರು ಸಹಕಾರ ಬ್ಯಾಂಕ್`ಗಳಲ್ಲಿ ಪಡೆದಿರುವ 25 ಸಾವಿರದವರೆಗಿನ ಸಾಲ ಮನ್ನಾ ಮಾಡುವ ಯೋಜನೆ ಘೋಷಿಸುವ ಸಾಧ್ಯತೆ ಇದೆ. ಇದರಿಂದ 10 ಲಕ್ಷ ರೈತರು ಸಂಪೂರ್ಣ ಸಾನಮನ್ನಾದ ಅನುಕೂಲ ಪಡೆಯಲಿದ್ದು, ಹೆಚ್ಚು ಸಾಲವಿರುವ ಉಳಿದ ರೈತರಿಗೆ 25 ಸಾವಿರದವರೆಗಿನ ಸಾಲಮನ್ನಾ ಆಗಲಿದೆ ಎನ್ನಲಾಗಿದೆ.

ಇದರ ಜೊತೆಗೆ ಎಸ್`ಸಿ, ಎಸ್`ಟಿಗೆ ಉಚಿತ ವಿದ್ಯುತ್, ವಸತಿ ಯೋಜನೆ ಸೇರಿದಂತೆ ಪ್ರಣಾಳಿಕೆಯಲ್ಲಿ ಘೋಷಿಸಿ ಈಡೇರಿಸದೇ ಉಳಿದಿರುವ ಯೋಜನೆಗಳ ಬಗ್ಗೆ ಹೆಚ್ಚು ಗಮನಹರಿಸುವ ಸಾಧ್ಯತೆ ಇದೆ.

 

ವೆಬ್ದುನಿಯಾವನ್ನು ಓದಿ