ಮದುವೆಯಾಗಲು ನಿರಾಕರಿಸಿದ ಪ್ರಿಯತಮೆ ಹತ್ಯೆಗೆ ಯತ್ನ

ಶನಿವಾರ, 25 ಮಾರ್ಚ್ 2017 (16:36 IST)
ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದಲ್ಲಿ ಆರೋಪಿಯೊಬ್ಬ ತನ್ನನ್ನು ವಿವಾಹವಾಗಲು ನಿರಾಕರಿಸಿದ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಪೆಟ್ರೋಲ್ ಸುರಿದು ಸಜೀವವಾಗಿ ದಹಿಸಲು ಯತ್ನಿಸಿದ ಘಟನೆ ವರದಿಯಾಗಿದೆ.
 
ಕಳೆದ ಮೂರು ವರ್ಷಗಳಿಂದ ಆರೋಪಿ ಪ್ರಿಯಕರ ಅಮರೇಗೌಡ ಮತ್ತು ಶಹಾನಾಬೇಗಂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಜಾತಿ ಬೇರೆಯಾಗಿದೆ ಎನ್ನುವ ಕಾರಣಕ್ಕೆ ಶಹಾನಾ ಬೇಗಂ ಕುಟುಂಬದವರು ವಿವಾಹಕ್ಕೆ ನಿರಾಕರಿಸಿದ್ದರು.
 
ಇದರಿಂದ ಆಕ್ರೋಶಗೊಂಡ ಅಮರೇಗೌಡ, ಪ್ರಿಯತಮೆ ಶಹಾನಾಬೇಗಂ ಕುತ್ತಿಗೆಗೆ ಚಾಕುವಿನಿಂದ ಕುತ್ತಿಗೆಗೆ ಇರಿದು ಗಾಯಗೊಳಿಸಿದ್ದಾನೆ. ನಂತರ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ಪುತ್ರಿಯನ್ನು ರಕ್ಷಿಸಲು ಬಂದ ತಾಯಿಗೂ ಬೆಂಕಿ ಹಚ್ಚಿದ್ದರಿಂದ ಗಂಭೀರವಾದ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಶಹಾನಾಬೇಗಂ ವಿವಾಹ ಬೇರೆ ಕಡೆ ನಿಶ್ಚಿಯವಾಗಿದ್ದರಿಂದ ಆಕೆಯ ಪ್ರಿಯಕರ ಆಕ್ರೋಶಗೊಂಡಿದ್ದ. ಕೃತ್ಯವೆಸಗಿದ ನಂತರ ಅಲ್ಲಿಂದ ಪರಾರಿಯಾಗಿದ್ದ ಎನ್ನಲಾಗಿದೆ.
 
ಶಹನಾಬೇಗಂ ಮತ್ತು ಆಕೆಯ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 
ಆತ್ಮಹತ್ಯೆಗೆ ಯತ್ನಿಸಿರುವ ಅಮರೇಗೌಡ
 
ಆರೋಪಿ ಅಮರೇಗೌಡ ಕೃತ್ಯವೆಸಗಿದ ಸ್ಥಳದಿಂದ ಪರಾರಿಯಾಗಿ ಗಂಗಾವತಿಯ ಹುಳ್ಕಿಹಾಳ್ ಗ್ರಾಮದ ಹೊರವಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
 
ಪೊಲೀಸರು ಆರೋಪಿ ಅಮರೇಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ