ಆತ್ಮಹತ್ಯೆ ಹೇಡಿತನದ ಕೃತ್ಯ ಎಂದಿದ್ದ ಸಿಪಿಐ ತಾವದನ್ನೇ ಮಾಡಿದ್ದೇಕೆ?

ಗುರುವಾರ, 20 ಅಕ್ಟೋಬರ್ 2016 (11:03 IST)
ತಮ್ಮ ಕಚೇರಿಯಲ್ಲೇ ತಲೆಗೆ ಗುಂಡಿಟ್ಟುಕೊಂಡು ಸಾವಿಗೆ ಶರಣಾದ ಮಾಲೂರು ಸರ್ಕಲ್ ಇನ್ಸಪೆಕ್ಟರ್ ರಾಘವೇಂದ್ರನ್ ಪ್ರಕರಣದ ಹಿನ್ನೆಲೆ ಕಗ್ಗಂಟಾಗುತ್ತಲೇ ಸಾಗಿದೆ. ಘಟನೆ ನಡೆದು 48 ಗಂಟೆಗಳಾದರೂ ಅವರು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. 
ವಿಚಿತ್ರವೆಂದರೆ ಕಳೆದ ತಿಂಗಳು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನ್ನಾಡುತ್ತಿದ್ದ ರಾಘವೇಂದ್ರನ್ ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು. ಇದು ಹೇಡಿಗಳೆಸಗುವ ಕೃತ್ಯ. ಯಾರು ಕೂಡ  ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದರು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ನೆರೆದವರಿಂದ ಪ್ರಮಾಣ ವಚನ ಮಾಡಿಸಿದ್ದರು ಎಂದು ತಿಳಿದು ಬಂದಿದೆ. 
 
ಪ್ರಕರಣದ ತನಿಖಾ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕೋಲಾರ್ ಡಿವೈಎಸ್‌ಪಿ ಅಬ್ಲುಲ್ ಸತ್ತಾರ್ ಸತ್ಯವನ್ನು ಹೊರಕ್ಕೆ ತೆಗೆಯಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. 
 
ಮೃತರ ಪರಿವಾರದವರು ಇನ್ನು ಕೂಡ ಆಘಾತದಿಂದ ಹೊರಬರದ ಕಾರಣ ಅವರನ್ನು ವಿಚಾರಿಸಲಾಗಿಲ್ಲ. ಬಡತನದಿಂದ ಮೇಲೆ ಬಂದಿದ್ದ ರಾಘವೇಂದ್ರನ್ ತಮ್ಮ ಅಕ್ಕ- ಭಾವನ ಸಹಾಯದಿಂದ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದರು. ತಮ್ಮ ಅಕ್ಕನ ಮಗಳನ್ನೇ ಮದುವೆಯಾಗಿದ್ದ ಅವರು ಪತ್ನಿಯೊಂದಿಗೆ ಅನೋನ್ಯವಾಗಿದ್ದರು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ