ಜೆಡಿಎಸ್​ನಿಂದ ಶಾಸಕರಾಗಿದ್ದಾಗ ಗುದ್ದಲಿ ಪೂಜೆ, ಬಿಜೆಪಿಯಿಂದ ಶಾಸಕರಾದ ಮೇಲೆ ಕಾಮಗಾರಿಯೇ ಶಿಫ್ಟ್​​!

ಸೋಮವಾರ, 21 ಜನವರಿ 2019 (16:27 IST)
ಅಲ್ಪಸಂಖ್ಯಾತರೇ ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಮುಖ್ಯಮಂತ್ರಿ ಅಭಿವೃದ್ಧಿ ಯೋಜನೆಯನ್ನು ನಗರದ ಇತರೆ ಬಡಾವಣೆಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ರಾಯಚೂರಿನಲ್ಲಿ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿ ಶೇಕಡಾ 70ರಷ್ಟು ಅಲ್ಪಸಂಖ್ಯಾತರು ವಾಸಿಸುವ ಪ್ರದೇಶಗಳಲ್ಲಿ ಕುಡಿಯುವ ನೀರು, ಚರಂಡಿ, ಸಿಸಿ ರಸ್ತೆ , ಯುಜಿಡಿ ಮತ್ತಿತರ ಮೂಲಭೂತ ಸೌಕರ್ಯ ಕಲ್ಪಿಸಿ ಅಲ್ಪಸಂಖ್ಯಾತರ ಅಭಿವೃದ್ಧಿ ಸಾಧಿಸಲು ಈ ಯೋಜನೆ ಜಾರಿಗೆ ತರಲಾಗಿತ್ತು. ಅಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ 2017-18 ನೇ ಸಾಲಿನಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ 19 ಕೋಟಿ ಅನುದಾನ ಬಿಡುಗಡೆ ಮಾಡಿತ್ತು.

ಅಲ್ಪಸಂಖ್ಯಾತರು ವಾಸವಾಗಿರುವ ನಗರದ ಅರಬ್ ಮೋಹಲ್ಲಾ, ಬೇರೂನ್ ಕಿಲ್ಲಾ , ಅಂದ್ರೂನ್ ಕಿಲ್ಲಾ, ಕೋಟ್ ತಲಾರ್, ಹಾಜಿ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗೆ ಒಟ್ಟು 28 ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಅದರಲ್ಲಿ 25 ಕಾಮಗಾರಿಗಳು ಪ್ರಾರಂಭವಾಗಿದ್ದವು. ಈ ಪೈಕಿ ಹೆಚ್ಚು ಕಾಮಗಾರಿಗೆ ಆಯ್ಕೆಯಾದ ಅಲ್ಪಸಂಖಾತರ ಬಡಾವಣೆ ಅಂದ್ರೂನ್ ಕಿಲ್ಲಾ, ಈ ಬಡಾವಣೆಗೆ 12 ಕಾಮಗಾರಿಗಳು ಮಂಜೂರಾಗಿವೆ. 

ಶಾಸಕ ಡಾ.ಶಿವರಾಜ್ ಪಾಟೀಲ್ ಅಂದು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದರು. ( ಪ್ರಸ್ತುತ ಬಿಜೆಪಿಯಿಂದ ಅಯ್ಕೆಯಾಗಿದ್ದಾರೆ) ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಕಾಮಗಾರಿ ಆರಂಭದಲ್ಲಿ ಸುಗಮವಾಗಿಯೇ ನಡೆದಿತ್ತು. ನಂತರ ವಿಧಾನಸಭಾ ಚುನಾವಣೆ ಘೋಷಣೆಯಾದ ಬಳಿಕ ಕಾಮಗಾರಿ ಸ್ಥಗಿತವಾಗಿತ್ತು. ಎರಡನೇ ಬಾರಿಗೆ ಶಾಸಕರಾದರೂ ಸದರಿ ನೆನೆಗುದಿಗೆ ಬಿದ್ದ ಕಾಮಗಾರಿ ಮುಂದುವರಿಸದೇ ಸದರಿ ಕಾಮಗಾರಿಗೆ ಬಿಡುಗಡೆಯಾದ ಅನುದಾನವನ್ನು ಬೇರೆ ಕಾಮಗಾರಿಗೆ ವಿನಿಯೋಗಿಸಲಾಗಿದ್ದಲ್ಲದೇ ಕಾಮಗಾರಿ ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ ಎಂಬ ಆರೋಪ ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ಕೇಳಿ ಬರುತ್ತಿದೆ. 

ಇದು ಅಲ್ಪಸಂಖ್ಯಾತ ಸಮುದಾಯಕ್ಕೆ ತೀವ್ರ ಅಸಮಾಧಾನ ಉಂಟು ಮಾಡಿದೆ. ಈ ಸಂಬಂಧ ಶಾಸಕ ಡಾ.ಶಿವರಾಜ್ ಪಾಟೀಲ್ ಅವರು ಇತ್ತೀಚೆಗೆ ಅಂದ್ರೂನ್ ಕಿಲ್ಲಾ ಬಡಾವಣೆಗೆ ಕಾಮಗಾರಿಯೊಂದಕ್ಕೆ ಗುದ್ದಲಿ ಪೂಜೆ ನೆರವೇರಿಸಲು ಬಂದಾಗ ಅಲ್ಪಸಂಖ್ಯಾತರ ಸಮುದಾಯದ ಯುವಕರು ಘೇರಾವ್ ಹಾಕಿದ್ದರು. ನಂತರ ಸ್ಥಳೀಯರು ಸಮಾಧಾನಪಡಿಸಿ ಕಳುಹಿಸಿದ್ದರು. ಇದೇ ಸಂದರ್ಭದಲ್ಲಿ ಯುವಕರು ಹಾಗೂ ಶಾಸಕರ ಮಧ್ಯೆ ತೀವ್ರ ಮಾತಿನ ಚಕಮಕಿಯೂ ನಡೆದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ