ಪುತ್ರಿ ವಿವಾಹಕ್ಕೆ ಜನಾರ್ದನ ರೆಡ್ಡಿಗೆ ಹಣ ಎಲ್ಲಿಂದ ಬಂತು? ಕಪ್ಪು ಹಣವಾ?: ಟಪಾಲ್ ಗಣೇಶ್

ಗುರುವಾರ, 20 ಅಕ್ಟೋಬರ್ 2016 (14:10 IST)
ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಪುತ್ರಿ ವಿವಾಹವನ್ನು ಅದ್ದೂರಿಯಾಗಿ ಮಾಡುತ್ತಿರುವುದು ಅಭಿನಂದನೀಯ. ಆದರೆ, ಇದಕ್ಕೆ ವೆಚ್ಚ ಮಾಡುತ್ತಿರುವ ಹಣ ಎಲ್ಲಿಯದು ಎನ್ನುವುದರ ಕುರಿತು ತನಿಖೆಯಾಗಬೇಕು ಎಂದು ಗಣಿ ಉದ್ಯಮಿ ಟಪಾಲ್ ಗಣೇಶ್ ಆಗ್ರಹಿಸಿದ್ದಾರೆ. 
 
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧನ ಮಾಡಿದಾಗ ಆದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದರು. ಹಾಗಾದರೇ ಈಗ ಪುತ್ರಿಯ ವಿವಾಹಕ್ಕೆ ವೆಚ್ಚ ಮಾಡುತ್ತಿರುವ ಹಣ ಎಲ್ಲಿಂದ ಬಂದಿದೆ. ಇದು ಕಪ್ಪು ಹಣವಾ ಎಂದು ಪ್ರಶ್ನಿಸಿದರು. 
 
ದೇಶದಲ್ಲಿನ ಆದಾಯ ತೆರಿಗೆ ವಂಚಕರಿಗೆಲ್ಲ ಕಪ್ಪು ಹಣ ಪ್ರಕಟಿಸುವಂತೆ ಹೇಳಿರುವ ಕೇಂದ್ರ ಸರಕಾರ, ರೆಡ್ಡಿ ಈಗ ವೆಚ್ಚ ಮಾಡುತ್ತಿರುವ ಕೋಟ್ಯಾಂತರ ರೂಪಾಯಿ ಹಣ ಎಲ್ಲಿಂದ ಬಂದಿದೆ ಎನ್ನುವದರ ಕುರಿತು ತನಿಖೆ ನಡೆಸಲಿ ಎಂದರು. 
 
ಜನಾರ್ದನ ರೆಡ್ಡಿ ಬಳ್ಳಾರಿಗೆ ಬರುತ್ತಿದ್ದಾನೆ. ರೆಡ್ಡಿಯನ್ನು ವಿರೋಧ ಹಾಕಿಕೊಂಡಿರುವ ನೀನು ಬದುಕುವುದು ಕಷ್ಟ ಎಂದು ಕೆಲವರು ಹೇಳುತ್ತಿದ್ದಾರೆ. ಇಂತಹ ಧಮ್ಕಿಗಳಿಗೆ ನಾನು ಹೆದರುವುದಿಲ್ಲ, ಒಂದು ವೇಳೆ, ನಾನು ಸತ್ತರೆ ರೆಡ್ಡಿಯಿಂದಲೇ ಎಂದು ಈಗಾಗಲೇ ಹೇಳಿದ್ದೇನೆ. ಅಕ್ರಮ ಗಣಿಗಾರಿಕೆಯಲ್ಲಿ ಅವರನ್ನು ಜೈಲಿಗೆ ಕಳುಹಿಸಿದ ತೃಪ್ತಿ ನನಗಿದೆ ಎಂದು ಟಪಾಲ್ ಗಣೇಶ್ ಹೇಳಿದರು.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ