ಕೊಡಗಿನ ಬ್ರಹ್ಮಗಿರಿಯ ತಲಕಾವೇರಿ

ಮಂಗಳವಾರ, 26 ಜುಲೈ 2016 (14:34 IST)
ಕೊಡಗಿನ ಬ್ರಹ್ಮಗಿರಿಯ ತಲಕಾವೇರಿಯಲ್ಲಿ ಹುಟ್ಟಿ ಕರ್ನಾಟಕ ದಾಟಿ ಪಕ್ಕದ ರಾಜ್ಯದಲ್ಲೂ ಹರಿಯುವ ಕಾವೇರಿ ನದಿ ಸಪ್ತಸಿಂಧು ಪವಿತ್ರ ನದಿಗಳಲ್ಲಿ ಒಂದಾಗಿದೆ. ಪ್ರತೀ ತುಲಾ ಸಂಕ್ರಮಣದಂದು ಇಲ್ಲಿ ತೀರ್ಥ ಉದ್ಭವವಾಗುತ್ತದೆ. 
ಕಾವೇರಿ ಕುಂಡ ನೋಡಿ ಮೇಲಿರುವ ಅಗಸ್ತ್ಯ ಮುನಿ ದೇವಾಲಯ ದರ್ಶಿಸಿ, ಮೆಟ್ಟಿಲುಗಳನ್ನು ಬಳಸಿ ಬ್ರಹ್ಮಗಿರಿಯ ತುತ್ತತುದಿಗೇರಿದರೆ, ಕೊಡಗಿನ ವಿಹಂಗಮ ನೋಟವೊಂದನ್ನು ಕಣ್ಣಲ್ಲಿ ತುಂಬಿಕೊಳ್ಳಬಹುದು. ಕಾಲು ಬಚ್ಚುತ್ತದೆಂಬ ಕುಂಟು ನೆಪ ಬೇಡ.
 
ತಲಕಾವೇರಿಯಿಂದ ಕೆಳಗಿರುವ ಭಾಗಮಂಡಲದಲ್ಲಿ ಭಗಂಡೇಶ್ವರ ದೇವಾಲಯವಿದೆ. ಕಾವೇರಿ ನದಿಯೊಂದಿಗೆ ಕನ್ನಿಕೆ ಹಾಗೂ ಸುಜ್ಯೋತಿ ನದಿಗಳು ಸೇರುವ ಸಂಗಮ ಸ್ಥಾನವಿದು. ಹಾಗಾಗಿ ಇದನ್ನು ತ್ರಿವೇಣಿ ಸಂಗಮವೆಂದೂ ಕರೆಯಲಾಗುತ್ತದೆ. ಕೇರಳ ಶೈಲಿಯ ಈ ದೇವಾಲಯದಲ್ಲಿ ತಾಮ್ರದ ಛಾವಣಿ ಹಾಗೂ ಕೆತ್ತನೆಗಳನ್ನು ಕಾಣುತ್ತೇವೆ.
ನಾಗರ ಹೊಳೆ ರಾಷ್ಟ್ರೀಯ ವನ್ಯಧಾಮ
ವಿರಾಜಪೇಟೆಯಿಂದ 64 ಕಿ.ಮೀ ದೂರದಲ್ಲಿರು ನಾಗರ ಹೊಳೆ ರಾಷ್ಟ್ರದ ಪ್ರಥಮ ಅಭಯಾರಣ್ಯವಾಗಿದೆ. ಅರಣ್ಯ ಇಲಾಖೆಯು ಮುಂಜಾನೆ ಮತ್ತು ಸಾಯಂಕಾಲಗಳಲ್ಲಿ ಪ್ರವಾಸಿಗಳಿಗಾಗಿ ವಾಹನದಲ್ಲಿ ಸವಾರಿ ತೆರಳುತ್ತದೆ. ಕಾಡುಕೋಣ, ಜಿಂಕೆ, ನವಿಲು, ಆನೆ ಸೇರಿದಂತೆ ಕೆಲವು ಪ್ರಾಣಿಪಕ್ಷಿಗಳು ಕಾಣಸಿಗುವುದು ನಿಶ್ಚಿತ. ಅದೃಷ್ಟವಂತರು ನೀವಾಗಿದ್ದರೆ, ಒಂದು ಚಿರತೆ, ಹುಲಿ ಇಲ್ಲವೇ ಕಾಳಿಂಗ ಸರ್ಪದಂತ ಭಯಂಕರ ಜಂತುಗಳು ನಿಮಗೆದುರಾಗಬಹುದು. 
 
ಕಕ್ಕಬೆ: ಕೊಡಗಿನ ಕಕ್ಕಬೆಯಲ್ಲಿ ಆಗ್ನೇಯ ಏಷ್ಯಾದಲ್ಲೇ ಅತಿ ಹೆಚ್ಚು ಜೇನು ಉತ್ಪಾದನೆಗೊಳ್ಳುತ್ತದೆ. ಇಲ್ಲಿನ ಇಗ್ಗುತ್ತಪ್ಪ ದೇವಾಲಯ ಅನೇಕ ಭಕ್ತರನ್ನು ಸೆಳೆದಿದೆ. ಇದು ಕೊಡಗಿನ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಕೊಡಗಿನ ಪ್ರಮುಖ ಹಬ್ಬ ಹುತ್ತರಿ ಅಥವಾ ಹುತ್ತರಿಯ ವೇಳೆ ಇಲ್ಲಿನ ದೇವರನ್ನು ಪೂಜಿಸಲಾಗುತ್ತದೆ. ಇಲ್ಲಿಂದ ಐದು ಕಿ.ಮೀ ದೂರದಲ್ಲಿ ನಲಂದ ಅರಮನೆ ಇದೆ. 
ಇಷ್ಟಲ್ಲದೆ ಮಡಿಕೇರಿಯಿಂದ 20 ಕಿ.ಮೀ ದೂರದಲ್ಲಿರುವ ಚೆಟ್ಟಳ್ಳಿ ಫಾರ್ಮ್, 36 ಕಿ.ಮೀ ದೂರದಲ್ಲಿ ಕುಶಾಲನಗರ ಸಮೀಪದಲ್ಲಿರುವ ಕಾವೇರಿ ನಿಸರ್ಗಧಾಮ, 40 ಕಿ.ಮೀ ದೂರದಲ್ಲಿರುವ ಹಾರಂಗಿ ಅಣೆಕಟ್ಟು, ಕುಶಾಲನಗರದ ಬೈಲುಗುಪ್ಪೆಯಲ್ಲಿರುವ ಟಿಬೇಟಿಯನ್ ಕಾಲನಿ, ಅಲ್ಲಿರುವ ದೇವಾಲಯ ಎಲ್ಲವೂ ನೋಡುವಂತಹುದೇ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ