ಮೋದಿ ಸಂಪುಟ ಸೇರಿದ 19 ಹೊಸಮುಖಗಳು

ಮಂಗಳವಾರ, 5 ಜುಲೈ 2016 (16:56 IST)
ಪ್ರಧಾನಿ ನರೇಂದ್ರ ಮೋದಿ ಇಂದು ಬಹುನಿರೀಕ್ಷಿತ ಸಂಪುಟ ವಿಸ್ತರಣೆಯನ್ನು ಕೈಗೊಂಡಿದ್ದು 5 ಮಂದಿಯನ್ನು ಕೈಬಿಟ್ಟಿದ್ದಾರೆ. ಕರ್ನಾಟಕದ ರಮೇಶ್ ಜಿಗಜಿಣಗಿ ಸೇರಿದಂತೆ 19 ಹೊಸ ಮುಖಗಳನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಲಾಗಿದೆ. 

 
ಮಂಗಳವಾರ ರಾಷ್ಟ್ರಪತಿ ಭವನದ ಅಶೋಕ್ ಸಭಾಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೊಸ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
 
ಅನುಭವ, ಯುವ ಮತ್ತು ಸಾಮಾಜಿಕ ಹಿನ್ನೆಲೆ ಮಿಶ್ರಣದ ಸಚಿವ ಸಂಪುಟದ ಇದಾಗಿದೆ.
 
19 ಹೊಸ ಮುಖಗಳ ಪಟ್ಟಿ ಇಂತಿದೆ: ರಮೇಶಚಂದ್ರಪ್ಪ ಜಿಗಜಿಣಗಿ- ಕರ್ನಾಟಕದ ದಲಿತ ನಾಯಕ, ಬಿಜೆಪಿ ಲೋಕಸಭಾ ಸದಸ್ಯ, ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಫಗ್ಗಾನ್ ಸಿಂಗ್ ಕುಲಾಸ್ತೆ. ಇತರ ದಲಿತ ಮುಖಗಳೆಂದರೆ ಷಹಜಹಾನ್ಪುರ ಸಂಸದ ಕೃಷ್ಣ ರಾಜ್, ಬಿಕನೇರ್ ಸಂಸದ ಅರ್ಜುನ್ ರಾಮ್ ಮೇಘ್ವಾಲ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಮ್ ದಾಸ್ ಅಠ್ವಾಲೆ (ಮಹಾರಾಷ್ಟ್ರ) ಮತ್ತು ಅಜಯ್ ತಮ್ಟಾ (ಉತ್ತರಖಾಂಡ್).
 
ಲೇಖಕ, ಪತ್ರಕರ್ತ ಎಂಜೆ ಅಕ್ಬರ್, ರಾಜಸ್ಥಾನದ ಜಾಟ್ ನಾಯಕಾರದ ಪಿ.ಪಿ ಚೌಧರಿ ಮತ್ತು ಸಿ. ಆರ್ ಚೌಧರಿ, ಪ್ರಸಿದ್ಧ ವೈದ್ಯ ಸುಭಾಶ್ ರಾಮ್ ರಾವ್ ಭಾಮ್ರೆ- ಸಹ ಸ್ಥಾನ ಪಡೆದಿದ್ದಾರೆ. 
 
ಸಂಪುಟದಲ್ಲಿ ಉತ್ತರ ಪ್ರದೇಶ, ರಾಜಸ್ಥಾನ್, ಗುಜರಾತ್, ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ಕರ್ನಾಟಕ ಮತ್ತು ಅಸ್ಸಾಂ ರಾಜ್ಯಗಳಿಗೆ ಮಣೆಹಾಕಲಾಗಿದೆ.
 
ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಉತ್ತರಪ್ರದೇಶದಿಂದ ಮಹೇಂದ್ರ ನಾಥ್ ಪಾಂಡೆ, ದಲಿತ ನಾಯಕ ಕೃಷ್ಣ ರಾಜ್(ಷಹಜಾನ್ಪುರದ ಸಂಸದ), ಮಿತ್ರ ಪಕ್ಷ ಅಪ್ನಾ ದಳದ ನಾಯಕಿ ಅನುಪ್ರಿಯಾ ಸಿಂಗ್ ಪಟೇಲ್ ಸಚಿವ ಸ್ಥಾನವನ್ನು ಪಡೆದಿದ್ದಾರೆ. 
 
ತಮ್ಮ ತವರು ರಾಜ್ಯ ಗುಜರಾತ್‌ನಿಂದ ಬುಡಕಟ್ಟು ನಾಯಕ ಜಸ್ವಂತ್ ಸಿಂಗ್ ಭಾಭೋರ್, ಮನ್ಸುಖ್ ಮಾಂಡವಿಯಾ (ಭಾವನಗರ ಸಂಸದ) ಪಟೇಲ್ ಸಮುದಾಯದ ಹಿರಿಯ ನಾಯಕ ಪುರುಷೋತ್ತಮ ರುಪಾಲಾ ಸ್ಥಾನ ಗಿಟ್ಟಿಸಿದ್ದಾರೆ. 
 
ಈ ಮೊದಲು ರಾಜ್ಯದ ಡಿವಿ ಸದಾನಂದ ಗೌಡ ಹಾಗೂ ಸಿದ್ದೇಶ್ವರ್ ಅವರ ಮಂತ್ರಿಸ್ಥಾನ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಅವರ ಸ್ಥಾನಕ್ಕೆ ಯಾವುದೇ ರೀತಿಯ ಕುತ್ತು ಬಂದಿಲ್ಲ.

ವೆಬ್ದುನಿಯಾವನ್ನು ಓದಿ