20 ರೂಪಾಯಿಗಾಗಿ ಆಮ್ಲೆಟ್ ಮಾರುತ್ತಿದ್ದ ಯುವಕನ ಹತ್ಯೆ !

ಸೋಮವಾರ, 27 ಫೆಬ್ರವರಿ 2017 (13:40 IST)
20 ರೂಪಾಯಿಗಾಗಿ 21 ವರ್ಷದ ಮೊಟ್ಟೆ ವ್ಯಾಪಾರಿಯನ್ನು ಹತ್ಯೆಗೈದ ಹೇಯ ಘಟನೆ ಹರಿಯಾಣಾದ ಪಲ್ವಾಲ್‌ನ ಕುಸ್ಲಿಪುರದಲ್ಲಿ ನಡೆದಿದೆ. 
ಬೀದಿಬದಿಯಲ್ಲಿ ಮೊಟ್ಟೆ, ಆಮ್ಲೆಟ್ ಮಾರುತ್ತಿದ್ದ ಚತ್ರಪಾಲ ಮೃತ ದುರ್ದೈವಿಯಾಗಿದ್ದಾನೆ.
 
ಭಾನುವಾರ ರಾತ್ರಿ ಚತ್ರಪಾಲ್ ಅಂಗಡಿಗೆ ಬಂದ ಆರೋಪಿ ನಟವರ್ ಆಮ್ಲೆಂಟ್‌ನ್ನು ತಿಂದಿದ್ದಾನೆ. ಆದರೆ ಹಣ ಕೊಡದೆ ವಾಪಸ್ಸಾಗುತ್ತಿದ್ದ ಆತನನ್ನು ಚತ್ರಪಾಲ್ ಪ್ರಶ್ನಿಸಿದ್ದಾನೆ. ಹೀಗಾಗಿ ಇಬ್ಬರ ನಡುವೆ ವಾದ ಪ್ರಾರಂಭವಾಗಿದೆ. ಹಲವು ದಿನಗಳಿಂದ ಹಣ ಕೊಡದೆ ಸತಾಯಿಸುತ್ತಿದ್ದ ನಟವರ್ ಬಳಿ ಚತ್ರಪಾಲ್ ತನಗೆ ಕೊಡಬೇಕಾಗಿರುವ 200ರೂಪಾಯಿಯನ್ನು ಕೇಳಿದ್ದಾನೆ. ಆದರಾತ ಒಪ್ಪದಿದ್ದಾಗ ಮತ್ತೆ ನನ್ನ ಅಂಗಡಿಗೆ ಬರಬೇಡ ಎಂದು ದಬಾಯಿಸಿದ್ದಾನೆ.
 
ಅಲ್ಲಿಂದ ಮರಳಿದ ಚತ್ರಪಾಲ್ ಕೆಲ ಗಂಟೆಗಳ ಬಳಿಕ ಗನ್ ಹಿಡಿದುಕೊಂಡು ಬಂದು ಚತ್ರಪಾಲ್ ಎದೆಗೆ ಹಾರಿಸಿದ್ದಾನೆ. ನೆಲಕ್ಕುರುಳಿದ ಚತ್ರಪಾಲ್‌ನನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆ ಆತ ಸಾವನ್ನಪ್ಪಿದ್ದಾನೆ. 
 
ಚತ್ರಪಾಲ್ ಸಂಬಂಧಿ ಧರ್ಮವೀರ್ ಈ ಕುರಿತು ದೂರು ದಾಖಲಿಸಿದ್ದು ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.
 
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪರಿವಾರದವರಿಗೆ ಒಪ್ಪಿಸಲಾಗಿದೆ.
 

ವೆಬ್ದುನಿಯಾವನ್ನು ಓದಿ